ADVERTISEMENT

ಪಿಕೆಪಿಎಸ್‌ ಚುನಾವಣೆ: ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ, ಪತಿ– ಪತ್ನಿ ತಂಟೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 17:29 IST
Last Updated 8 ಸೆಪ್ಟೆಂಬರ್ 2025, 17:29 IST
   

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕೋರಂ ಸಲುವಾಗಿ ಸೋಮವಾರ ನಿಗದಿಗೊಂಡಿದ್ದ ಚುನಾವಣೆ ಕಾಲಕ್ಕೆ ತ್ವೇಷಮಯ ವಾತಾವರಣ ನಿರ್ಮಾಣವಾಯಿತು. ಗ್ರಾಮದ ಕೆಲವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ ಮೊಳಗಿಸಿದರು. ಗಲಾಟೆ ಕಾಲಕ್ಕೆ ಸ್ಥಳಕ್ಕೆ ಬಂದ ಡಿಸಿಸಿ ಬ್ಯಾಂಕ್‌ ಅಭ್ಯರ್ಥಿ ರಮೇಶ ಕತ್ತಿ ಪರ ಜೈಕಾರ ಕೂಡ ಮೊಳಗಿಸಿದರು.

ಅ.19ರಂದು ಡಿಸಿಸಿ ಬ್ಯಾಂಕ್‌ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮದಿಹಳ್ಳಿ ಪಿಕೆಪಿಎಸ್‌ನಲ್ಲಿ ಸೋಮವಾರ ‘ಡೆಲಿಗೇಷನ್’ ಸಲುವಾಗಿ ಕೋರಂ ಕರೆಯಲಾಗಿತ್ತು. 11 ನಿರ್ದೇಶಕ ಪೈಕಿ ಮೊದಲು ಸತೀಶ ಜಾರಕಿಹೊಳಿ ಪರವಾಗಿ ಆರು, ರಮೇಶ ಕತ್ತಿ ಪರವಾಗಿ ಐವರು ಇದ್ದರು. ಕೊನೆಯ ಘಳಿಗೆಯಲ್ಲಿ ಒಬ್ಬ ವ್ಯಕ್ತಿ ಸತೀಶ ಅವರನ್ನು ಬಿಟ್ಟು ರಮೇಶ ಅವರ ಪೆನಲ್‌ಗೆ ಬೆಂಬಲ ಸೂಚಿಸಲು ಮುಂದಾದರು. ಇದೇ ಕಾರಣಕ್ಕೆ ಬೆಂಬಲಿತರ ಮಧ್ಯೆ ಗಲಾಟೆ ನಡೆಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪಿಕೆಪಿಎಸ್ ನಿರ್ದೇಶಕ ಮಾರುತಿ ದಂಡಾಪುರ ಎನ್ನುವವರು ಕಳೆದ ಐದು ದಿನಗಳಿಂದ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸೋಮವಾರ ಮತದಾನ ಮಾಡಲು ಅವರನ್ನು ಸತೀಶ ಜಾರಕಿಹೊಳಿ ಪರವಾಗಿ ಕರೆತರಲಾಗಿತ್ತು. ಆಗ ಸ್ಥಳಕ್ಕೆ ಧಾವಿಸಿದ ಮಾರುತಿ ಅವರ ಪತ್ನಿ ಅವರಿಗೆ ಕಪಾಳಮೋಕ್ಷ ಮಾಡಿ, ಎಳೆದುಕೊಂಡು ಮನೆಗೆ ಹೋದರು. ಸಚಿವ ಸತೀಶ ಅವರ ಸಮ್ಮುಖದಲ್ಲಿಯೇ ಪತಿ– ಪತ್ನಿ ಜಗಳ ತಾರಕಕ್ಕೇರಿತು.

ADVERTISEMENT

ಪಿಕೆಪಿಎಸ್‌ನ ನಿರ್ದೇಶಕರನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ರಮೇಶ ಕತ್ತಿ ಪರ ಗುಂಪು ಘೋಷಣೆ ಕೂಗಿತು. ಇದರಿಂದ ಬೇಸತ್ತ ಸಚಿವ ಸತೀಶ ಸ್ಥಳದಿಂದ ಹೊರಟು ಹೋದರು.

ಗಲಾಟೆಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೇಲೆ ವಿಷಯ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.