ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ಮಹಾನಗರ ಪಾಲಿಕೆ ಸದಸ್ಯ ರವಿ ಸಾಳುಂಕೆ ಅವರ ಸದಸ್ಯತ್ವ ರದ್ದುಪಡಿಸಿ, ಬೆಳಗಾವಿಯಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಕಾರರು ಮೆರವಣಿಗೆ ನಡೆಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಪಾಲಿಕೆಯಲ್ಲಿ ನಡೆಯುವ ಸಭೆಯ ನಡಾವಳಿಗಳನ್ನು ಮರಾಠಿಯಲ್ಲೇ ನೀಡುವಂತೆ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ ಒತ್ತಾಯಿಸಿರುವುದು ಸರಿಯಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಬೆಳಗಾವಿಯಲ್ಲಿ ಎಂಇಎಸ್ನ ಮುಖಂಡರು ಪದೇಪದೆ ಗಡಿ ವಿಚಾರ ಪ್ರಸ್ತಾಪಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಯಾವ ಕಾರಣಕ್ಕೂ ಪಾಲಿಕೆಯಲ್ಲಿ ಮರಾಠಿ ದಾಖಲೆಗಳನ್ನು ಕೊಡಬಾರದು’ ಎಂದು ಆಗ್ರಹಿಸಿದರು.
‘ಗಣೇಶೋತ್ಸವ ಮತ್ತು ದಸರಾ ಸಂದರ್ಭ ಎಂಇಎಸ್ ಹಾಗೂ ಶಿವಸೇನೆಯವರು ಉದ್ದೇಶ ಪೂರ್ವಕವಾಗಿ ಮರಾಠಿ ನಾಮಫಲಕ, ಫ್ಲೆಕ್ಸ್ ಅಳವಡಿಸುತ್ತಾರೆ. ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಬಾರದು. ಬೆಳಗಾವಿಯಲ್ಲಿ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನಕ್ಕೆ ಕ್ರಮ ವಹಿಸಬೇಕು. ಕನ್ನಡ ಅವಮಾನಿಸುವಂತೆ ಬೇರೆ ಭಾಷೆಯ ನಾಮಫಲಕಗಳ ಅಳವಡಿಕೆಯಾದರೆ, ಅವುಗಳಿಗೆ ಮಸಿ ಬಳಿದು ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹಿರೇಕೋಡಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.