
ಚನ್ನಮ್ಮನ ಕಿತ್ತೂರು: ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸುವ ಬರುವ ಸಚಿವರುಗಳನ್ನು ಸ್ವಾಗತಿಸುವ ಭರದಲ್ಲಿ ಹೆದ್ದಾರಿ ಉದ್ದಕ್ಕೂ ಇರುವ ರಸ್ತೆ ಸೂಚನಾ ಫಲಕಗಳು ಮುಚ್ಚುವಂತೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಲಾಗಿದೆ.
ಚಾಲಕರು ಮತ್ತು ಪ್ರಯಾಣಿಕರಿಗೆ ಇದರಿಂದ ತೊಂದರೆ ಆಗಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಾದರೂ ಇವುಗಳ ಮೇಲಿನ ಫ್ಲೆಕ್ಸ್, ಬ್ಯಾನರ್ ಮುಸುಕು ತೆಗೆಸಬೇಕು ಎಂದು ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ ಆಗ್ರಹಿಸಿದ್ದಾರೆ.
ಗುರುವಾರ ಪತ್ರಕರ್ತರ ಜತೆ ಮಾತನಾಡಿ, ‘ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವ ಫಲಕಗಳು ರಸ್ತೆಗಳು ರಸ್ತೆ ತಿರುವು, ಪೆಟ್ರೋಲ್ ಬಂಕ್, ಹೋಟೆಲ್, ಹೆದ್ದಾರಿ ಬದಿಗಿರುವ ಊರುಗಳನ್ನು ಪರಿಚಯಿಸುತ್ತವೆ. ದೊಡ್ಡ ಗಾತ್ರದ ಬ್ಯಾನರ್ಗಳಿಂದಾಗಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಏನೂ ಕಾಣಿಸುತ್ತಿಲ್ಲ’ ಎಂದು ದೂರಿದರು.
‘ಮುಖ್ಯಮಂತ್ರಿ, ಸಚಿವರು, ಪ್ರಭಾವಿ ಶಾಸಕರ ಭಾವಚಿತ್ರ ಇರುವ ಇವುಗಳನ್ನು ತೆರವು ಮಾಡಿಸಲು ಹೆದ್ದಾರಿ ಉಸ್ತುವಾರಿ ನೋಡಿಕೊಳ್ಳುವವರು ಭಯ ಪಡುತ್ತಾರೆ. ಆರ್ಟಿಒ ಅಧಿಕಾರಿಗಳು ಮತ್ತು ಪೊಲೀಸರು ಇದರತ್ತ ಕಣ್ಣೆತ್ತಿ ನೋಡದಂತಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.