ADVERTISEMENT

ಬೆಳಗಾವಿ: ಎಂಇಎಸ್‌ನಿಂದ ಶಿವಾಜಿ ಪ್ರತಿಮೆ ‘ಶುದ್ಧೀಕರಣ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 15:22 IST
Last Updated 19 ಮಾರ್ಚ್ 2023, 15:22 IST
   

ಬೆಳಗಾವಿ: ‘ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಪ್ರತಿಮೆಯನ್ನು ಬಳಸಿಕೊಂಡು, ಶಿವಾಜಿ ಮಹಾರಾಜರಿಗೆ ಅಪಚಾರ ಎಸಗಿದ್ದಾರೆ’ ಎಂದು ಆರೋಪಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌), ರಾಜಹಂಸಗಡ ಕೋಟೆಯಲ್ಲಿ ಭಾನುವಾರ ಪ್ರತಿಮೆ ಶುದ್ಧೀಕರಣಗೊಳಿಸಿತು.

ಪಂಚ ನದಿಗಳಿಂದ ನೀರು ತಂದು, ಪ್ರತಿಮೆ ಶುಚಿಗೊಳಿಸಲಾಯಿತು. ನಂತರ ಕ್ಷೀರಾಭಿಷೇಕ ಮಾಡಲಾಯಿತು. ರಾಯಗಡದಿಂದ ಅರ್ಚಕರನ್ನು ಆಹ್ವಾನಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಜನರು ಇದಕ್ಕೆ ಸಾಕ್ಷಿಯಾದರು.

ಈಗಾಗಲೇ ಎರಡು ಬಾರಿ ಅನಾವರಣಗೊಂಡಿದ್ದ ಶಿವಾಜಿ ಪ್ರತಿಮೆ ‘ಶುದ್ಧೀಕರಣ’ ನೆಪದಲ್ಲಿ ಸೇರಿದ ಮರಾಠಿಗರು ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮರಾಠಿಗರೆಲ್ಲ ಒಂದಾಗಿರುತ್ತೇವೆ’ ಎಂದೂ ಸಂಕಲ್ಪ ಮಾಡಿದರು.

ADVERTISEMENT

ಶಿವಾಜಿ ಪ್ರತಿಮೆ ಲೋಕಾರ್ಪಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆ ವಿಷಯವಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ರಾಜಕೀಯ ಜಿದ್ದಿಗೆ ಬಿದ್ದಿರುವ ಶಾಸಕ ರಮೇಶ ಜಾರಕಿಹೊಳಿ, ಮಾರ್ಚ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ರಾಜಹಂಸಗಡಕ್ಕೆ ಆಹ್ವಾನಿಸಿ ಪ್ರತಿಮೆ ಉದ್ಘಾಟಿಸುವಲ್ಲಿ ಯಶಸ್ವಿಯಾಗಿದ್ದರು.

ಪ್ರತಿಯಾಗಿ ಲಕ್ಷ್ಮಿ ಹೆಬ್ಬಾಳಕರ ಅವರು, ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ ಅವರನ್ನು ಮಾರ್ಚ್ 5ರಂದು ಇಲ್ಲಿಗೆ ಕರೆಯಿಸಿ ಮತ್ತೊಮ್ಮೆ ಪ್ರತಿಮೆ ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.