ADVERTISEMENT

‘ಕನ್ನಡ ಕೋಗಿಲೆ’ಯಲ್ಲಿ ಶ್ರವಣಕುಮಾರ; ಭಜನೆಯಿಂದ ರಿಯಾಲಿಟಿ ಶೋಗೆ ಲಗ್ಗೆ

ರಾಮದುರ್ಗದ ಪ್ರತಿಭೆ

ಮಹಾಂತೇಶ ಜಾಂಗಟಿ
Published 25 ಮೇ 2019, 19:45 IST
Last Updated 25 ಮೇ 2019, 19:45 IST
ಕನ್ನಡ ಕೋಗಿಲೆ ವೇದಿಕೆಯಲ್ಲಿ ಶ್ರವಣಕುಮಾರ
ಕನ್ನಡ ಕೋಗಿಲೆ ವೇದಿಕೆಯಲ್ಲಿ ಶ್ರವಣಕುಮಾರ   

ಬೆಳಗಾವಿ: ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಕನ್ನಡ ಕೋಗಿಲೆ’ ಆವೃತ್ತಿ–2ರಲ್ಲಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರವಣಕುಮಾರ ಮುದ್ದಿ ತನ್ನ ಕಂಚಿನ ಕಂಠದ ಮೂಲಕ ರಾಜ್ಯದಾದ್ಯಂತ ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೆಗಾ ಆಡಿಷನ್‌ನಲ್ಲಿ ಇಷ್ಟದ ದೇವರು ಆಂಜನೇಯನನ್ನು ನೆನೆದು ಹಾಡಿದ ಭಜರಂಗಿ ಚಿತ್ರದ ‘ರೇ ರೇ ರೇ ರೆ ರೇ ರೆ ರೇ ರೆ ಭಜರಂಗಿ’ ಹಾಡಿನ ಮೂಲಕ ಇವರು ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಜೊತೆಗೆ ಮೊದಲ ಹಾಡಿನಿಂದಲೇ ಪ್ರೇಕ್ಷಕರ ಹೃದಯ ಗೆದ್ದರು.

ಕಾರ್ಯಕ್ರಮದೂದ್ದಕ್ಕೂ ಅವರು ಪ್ರಸ್ತುತಪಡಿಸುತ್ತಿರುವ ಚಲನಚಿತ್ರ ಗೀತೆಗಳು ನಿರ್ಣಾಯಕರ ಮನಗೆದ್ದಿವೆ. ಜೋಡಿಹಕ್ಕಿ ಚಿತ್ರದ ‘ಲಾಲಿ ಸುವ್ವಾಲಿ’, ಡ್ಯಾನ್ಸ್‌ ರಾಜಾ ಡ್ಯಾನ್ಸ್‌ ಚಿತ್ರದ ‘ಅಮ್ಮಾ ಅಮ್ಮಾ ನಿನ್ನಾ ತ್ಯಾಗಕೆ’, ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ‘ಮೋಸ ಮಾಡಲೆಂದೆ ನೀನು ಬಂದೆಯಾ’ ಸೇರಿ ಇನ್ನಿತರ ಗೀತೆಗಳಿಂದಾಗಿ ಮನ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಹೆಸರನ್ನೂ ಬೆಳಗಿಸಿದ್ದಾರೆ.

ADVERTISEMENT

ಭಜನೆ ಹಾಡುತ್ತಿದ್ದವರು:

ಅವರ ತಂದೆ ಕುಬೇರಪ್ಪ ತಬಲಾ ವಾದಕರಾಗಿದ್ದು, ಗಾಯಕರೂ ಹೌದು. ಅವರು ದೇವಸ್ಥಾನ ಹಾಗೂ ವಿಶೇಷ ಕಾರ್ಯಮಗಳಿಗೆ ಭಜನೆ ಮಾಡಲು ತೆರಳುತ್ತಿದ್ದಾಗ ಮಗನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಶ್ರವಣ ಅವರಿಗೂ ಸಂಗೀತದಲ್ಲಿ ಆಸಕ್ತಿ ಮೂಡಿತು. ಆದರೆ, ಅವರು ಸಂಗೀತ ತರಬೇತಿ ಪಡೆದಿಲ್ಲ. ಹವ್ಯಾಸಕ್ಕಾಗಿ ಹಾಡುತ್ತಲೇ ಉತ್ತಮ ಗಾಯಕರಾಗಿ ಹೊರಹೊಮ್ಮಿದ್ದಾರೆ.

ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಆಯೋಜಿಸುತ್ತಿದ್ದ ಜಾತ್ರೆ, ಉತ್ಸವ ಹಾಗೂ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ಹಾಡುತ್ತಿದ್ದರು; ಮೆಚ್ಚುಗೆ ಗಳಿಸುತ್ತಿದ್ದರು. ಇದು ಅವರಿಗೆ ಪ್ರೇರಣೆ ನೀಡುತ್ತಿತ್ತಂತೆ.

ಬಡತನದಲ್ಲಿ ಅರಳಿದ ಪ್ರತಿಭೆ:

1995ರ ಅ. 22ರಂದು ಜನಿಸಿದ ಅವರು, ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಲೇ ಬೆಳೆದಿದ್ದಾರೆ. ಬಿ.ಕಾಂ. ಪೂರೈಸಿದ ನಂತರ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಉಂಟಾಗಿ, ಹುಬ್ಬಳ್ಳಿಯಲ್ಲಿನ ಖಾಸಗಿ ಸಂಸ್ಥೆಯಲ್ಲಿ ಕೆಲವು ತಿಂಗಳು ಕಾರ್ಯನಿರ್ವಹಿಸಿದ್ದರು. ಉನ್ನತ ಶಿಕ್ಷಣ ಪಡೆಯಬೇಕೆಂಬ ಆಶಯ ಹೊಂದಿದ್ದಾರೆ. ಅವರ ತಂದೆ ನೇಕಾರಿಕೆ ಮಾಡುತ್ತಾರೆ. ಶ್ರವಣ ಕೂಡ ಚಿಕ್ಕ ವಯಸ್ಸಿನಿಂದಲೂ ತಂದೆಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ.

ಸೀರೆ ಉಡುಗೊರೆ:

ಅವರು ನೇಕಾರಿಕೆ ಮಾಡುತ್ತಾರೆ ಎಂಬ ವಿಷಯ ತಿಳಿದ ನಿರ್ಣಾಯಕರಲ್ಲಿ ಒಬ್ಬರಾದ ಬಿಗ್‌ಬಾಸ್ ಖ್ಯಾತಿಯ ಚಂದನ್‌ ಶೆಟ್ಟಿ ಅವರು ತಮ್ಮ ತಾಯಿಗೆ ಎರಡು ಸೀರೆ ತಂದು ಕೊಡುವಂತೆ ಕೋರಿಕೆ ಇಟ್ಟಿದ್ದರು. ಮುಂದಿನ ಎಪಿಸೋಡ್‌ನಲ್ಲೇ ಶ್ರವಣಕುಮಾರ ತಾನೇ ಸಿದ್ಧಪಡಿಸಿದ ಸೀರೆಯನ್ನು ಉಡುಗೊರೆ ನೀಡಿದರು. ನಂತರ ನಿರ್ಣಾಯಕಿ ಅರ್ಚನಾ ಹಾಗೂ ಮಹಿಳಾ ಸ್ಪರ್ಧಿಗಳು ಸೇರಿ ಒಟ್ಟು 9 ಜನರಿಗೂ ಕೂಡ ಸೀರೆ ಕೊಟ್ಟಿದ್ದರು.

‘ತಾಯಂದಿರ ದಿನದ ವಿಶೇಷ’ ಸಂಚಿಕೆಯಲ್ಲಿ ನಾನೆ ಸಿದ್ಧಪಡಿಸಿದ ಸೀರೆಯನ್ನು ಕನ್ನಡ ಕೋಗಿಲೆ ವೇದಿಕೆಯಲ್ಲೇ ತಾಯಿಗೆ ಉಡುಗೊರೆಯಾಗಿ ಕೊಟ್ಟಿದ್ದೆ. ಇದು ನನಗೆ ಸ್ಮರಣೀಯ ಘಳಿಗೆ’ ಎಂದು ಶ್ರವಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.