
ಬೆಳಗಾವಿ: ಸಚಿವರು, ಶಾಸಕರು ಸೇರಿ ಇಡೀ ರಾಜ್ಯ ಸರ್ಕಾರವೇ ಈಗ ಬೆಳಗಾವಿಗೆ ದಾಂಗುಡಿ ಇಟ್ಟಿದೆ. ಸುಮಾರು 10 ಸಾವಿರ ಸಿಬ್ಬಂದಿಯನ್ನು ಅಧಿವೇಶನಕ್ಕೆ ನಿಯೋಜನೆ ಮಾಡಲಾಗಿದೆ. ಎಲ್ಲರಿಗೂ ಕಾರುಗಳ ವ್ಯವಸ್ಥೆ, ವಸತಿ ಹಾಗೂ ಊಟದ ವ್ಯವಸ್ಥೆ ಇದೆ. ಪ್ರತಿ ದಿನವೂ ನಗರದಲ್ಲಿ ಒಂದಿಲ್ಲೊಂದು ಕಡೆ ಸಭೆ–ಸಮಾರಂಭಗಳು ನಡೆಯುತ್ತಿವೆ. ಹೀಗಾಗಿ, ವಾಹನಗಳು ಎಲ್ಲ ರಸ್ತೆಗಳಲ್ಲೂ ಗಿಜಿಗುಡುತ್ತವೆ.
ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸುವ ಶಾಸಕರ ವಸತಿಗಾಗಿ ಸುವರ್ಣ ವಿಧಾನಸೌಧದ ಆವರಣದಲ್ಲೇ ಶಾಸಕರ ಭವನ ನಿರ್ಮಿಸಬೇಕೆಂಬ ಕೂಗು ದಶಕದಿಂದಲೂ ಕೇಳಿಬರುತ್ತಿದೆ. ಆದರೆ, ಈವರೆಗೂ ಅದು ಈಡೇರಿಲ್ಲ. ಇದೇ ಕಾರಣಕ್ಕೆ ನಗರದಲ್ಲಿ ಸಂಚಾರ ಸಮಸ್ಯೆ, ವಸತಿ ಕೊರತೆ ಹಾಗೂ ಆಹಾರ ಸಾಮಗ್ರಿ ಸಾಗಣೆಗೆ ಸಂಕಷ್ಟ ಎದುರಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರವಲ್ಲ; ಅವರ ಬೆಂಬಲಿಗರು, ಕೆಲಸ ಕಾರ್ಯಗಳಿಗೆ ಬರುವವರ ವಾಹನಗಳು ದಿನವಿಡೀ ನಗರದಲ್ಲಿ ಓಡಾಡುತ್ತಿವೆ. ಮುಖ್ಯಮಂತ್ರಿ, ಸಚಿವರ ವಾಹನಗಳು ಸಾಗುವ ವೇಳೆ, ಆಯಾ ಮಾರ್ಗದಲ್ಲಿ ಸಾರ್ವಜನಿಕರಿಗೆ ಸಾಗಲು ತಡೆಯೊಡ್ಡಲಾಗುತ್ತಿದೆ.
ಸೌಧಕ್ಕೆ ಸಾಗುವ ಮಾರ್ಗ ಮತ್ತು ಜನಪ್ರತಿನಿಧಿಗಳು ತಂಗಿರುವ ಹೋಟೆಲ್ಗಳ ಬಳಿ ಬೆಂಬಲಿಗರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಟ್ರಾಫಿಕ್ ಜತೆಗೆ, ಪಾರ್ಕಿಂಗ್ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ.
‘ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ ರಾಜಕಾರಣಿಗಳು, ಬೆಳಿಗ್ಗೆ 9.30ರಿಂದ 10.30ರ ಅವಧಿಯಲ್ಲಿ ಸೌಧಕ್ಕೆ ಹೋಗುತ್ತಾರೆ. ಅವರ ವಾಹನಗಳು ಹೋಗುವಾಗ ಸಂಚಾರ ಪೊಲೀಸರು ನಮ್ಮನ್ನು ತಡೆಯುತ್ತಾರೆ. ಇದರಿಂದ ಕೆಲಸಕ್ಕಾಗಿ ಸರಿಯಾದ ಸಮಯಕ್ಕೆ ನಾವು ಕಚೇರಿಗೆ ಹೋಗಲಾಗುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ’ ಎನ್ನುತ್ತಾರೆ ರಾಮತೀರ್ಥ ನಗರದ ವಾಹನ ಸವಾರ ಸುಮಂತ ಮಾರಿಹಾಳ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ಬೆಳಗಾವಿ ನಗರದ ವಿವಿಧ ಹೋಟೆಲ್ಗಳು, ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗೆ ಇಲ್ಲಿಯೇ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇವರೆಲ್ಲರಿಗಾಗಿ ಜಿಲ್ಲಾಡಳಿತ 3 ಸಾವಿರ ಕೊಠಡಿ ಕಾಯ್ದಿರಿಸಿದೆ.
ಈಗ ಮದುವೆ ಮತ್ತು ವಿವಿಧ ಸಮಾರಂಭಗಳ ಸುಗ್ಗಿ. ಕ್ರಿಸ್ಮಸ್ ಪ್ರಯುಕ್ತ ಮತ್ತು ಪ್ರವಾಸಕ್ಕಾಗಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದಿಂದ ಆಗಮಿಸಿ ಗೋವಾಕ್ಕೆ ತೆರಳುವ ಬಹುತೇಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿ, ಮಾರನೇ ದಿನ ಬೆಳಿಗ್ಗೆ ಪ್ರಯಾಣ ಆರಂಭಿಸುವುದು ರೂಢಿ. ಆದರೆ, ಈಗ ಯಾವುದೇ ಹೋಟೆಲ್ನಲ್ಲಿ ವಸತಿಗಾಗಿ ಕೊಠಡಿ ಸಿಗದೆ ಜನರು ಪರದಾಡುವಂತಾಗಿದೆ. ‘ಅಧಿವೇಶನದ ಗೊಡವೆಯೇ ಬೇಡ’ ಎಂದು ಕೆಲವರು ವಿವಾಹ ಸಮಾರಂಭಗಳನ್ನೇ ಮುಂದೂಡಿಕೆ ಮಾಡಿದ್ದಾರೆ.
ಪ್ರತಿವರ್ಷ ಇಲ್ಲಿ ಅಧಿವೇಶನ ನಡೆಸಲು ಬರುವ ಸರ್ಕಾರಕ್ಕೆ ‘ಶಾಸಕರ ಭವನ ನಿರ್ಮಾಣ ಯಾವಾಗ’ ಎಂಬ ಪ್ರಶ್ನೆ ಎದುರಾಗುತ್ತದೆ. ‘ಇದಕ್ಕೆ ಪ್ರಕ್ರಿಯೆ ನಡೆದಿದೆ. ಶೀಘ್ರ ನಿರ್ಮಿಸುತ್ತೇವೆ’ ಎಂದು ಅಧಿಕಾರದಲ್ಲಿರುವ ಎಲ್ಲ ಸರ್ಕಾರಗಳು ಭರವಸೆ ಕೊಡುತ್ತಲೇ ಬಂದಿವೆ. ಆದರೆ ಸುವರ್ಣ ವಿಧಾನಸೌಧ ಉದ್ಘಾಟನೆಯಾಗಿ 13 ವರ್ಷಗಳಾದರೂ ಬೇಡಿಕೆ ಮಾತ್ರ ಈಡೇರಿಲ್ಲ.
‘ಶಾಸಕರ ಭವನ ನಿರ್ಮಾಣಕ್ಕಾಗಿ ಸುವರ್ಣ ವಿಧಾನಸೌಧ ಆವರಣದಲ್ಲಿ 21 ಎಕರೆ ಜಾಗ ಲಭ್ಯವಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರಲ್ಲಿ 434 ಕೊಠಡಿ ರೆಸ್ಟೋರೆಂಟ್ ಜಿಮ್ ಕೋರ್ಟ್ಯಾರ್ಡ್ ವಾಕಿಂಗ್ ಟ್ರ್ಯಾಕ್ ಮತ್ತಿತರ ಸೌಕರ್ಯ ನಿರ್ಮಿಸಲಿದ್ದು ಅಂದಾಜು ₹300 ಕೋಟಿ ವೆಚ್ಚವಾಗಲಿದೆ. ಆದರೆ ಶಾಸಕರ ಭವನ ನಿರ್ಮಾಣ ಸಂಬಂಧ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಸೊಬರದ ‘ಪ್ರಜಾವಾಣಿ’ಗೆ ತಿಳಿಸಿದರು.
ಸಮಾರಂಭವೊಂದರಲ್ಲಿ ಭಾಗವಹಿಸಲು ದಾವಣಗೆರೆಯಿಂದ ಬೆಳಗಾವಿಗೆ ಬಂದಿದ್ದೇನೆ. ಆದರೆ ಲಾಡ್ಜ್ನಲ್ಲಿ ಕೊಠಡಿ ಸಿಗದೆ ಪರದಾಡುವಂತಾಗಿದೆ.–ಈಶ್ವರ, ಉದ್ಯಮಿ
ಶಾಸಕರ ಭವನ ನಿರ್ಮಾಣವಾದರೆ ಅಧಿವೇಶನ ವೇಳೆ ಸಂಚಾರದಟ್ಟಣೆ ಕಡಿಮೆಯಾಗುತ್ತದೆ. ಸವಾರರು ಅದರಲ್ಲೂ ಮುಖ್ಯವಾಗಿ ರೋಗಿಗಳು ಸಮಸ್ಯೆ ಎದುರಿಸುವುದು ತಪ್ಪುತ್ತದೆ–ಸುರೇಶ ಯಾದವ, ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.