ಬೆಳಗಾವಿ: ‘ವರ್ಷದಲ್ಲಿ ಒಮ್ಮೆಯಾದರೂ ರಕ್ತ ದಾನ ಮಾಡುವ ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಸಲಹೆ ನೀಡಿದರು.
ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಬಿಮ್ಸ್, ರೆಡ್ಕ್ರಾಸ್ ಸಂಸ್ಥೆ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಯೋಗದಲ್ಲಿ ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿ ಅವರು ಮಾತನಾಡಿದರು.
‘ರಕ್ತ ದಾನ ಮಹಾದಾನವಾಗಿದೆ. ಆರೋಗ್ಯವಂತರಾದವರು ದಾನ ಮಾಡಬಹುದಾಗಿದೆ. ರಕ್ತದಲ್ಲಿರುವ ವಿವಿಧ ಘಟಕಗಳನ್ನು ಬೇರ್ಪಡಿಸಿ ಹಲವರ ಜೀವ ಉಳಿಸಬಹುದಾಗಿದೆ. ಅಪಘಾತ, ಶಸ್ತ್ರಚಿಕಿತ್ಸೆ, ಪ್ರಸವದ ತೊಂದರೆ, ರಕ್ತಹೀನತೆ ಮತ್ತು ಗಂಭೀರ ಸ್ವರೂಪದ ಕಾಯಿಲೆಗಳ ನಿರ್ವಹಣೆಗೆ ರಕ್ತ ಅತ್ಯವಶ್ಯವಾಗಿ ಬೇಕಾಗುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ಖಾನಾಪುರ ಬಿಇಒ ಲಕ್ಷ್ಮಣರಾವ ಯಕ್ಕುಂಡಿ, ನಗರ ಮಹೇಶ ಢವಳೆ, ಕೆ. ಶೀತಲ ಹಾಗೂ ಅರುಣ ಪಾಟೀಲ ಅವರನ್ನು ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಡಾ.ಚಾಂದನಿ ದೇವಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ, ಬಿಮ್ಸ್ ರಕ್ತ ನಿಧಿಯ ವೈದ್ಯಾಧಿಕಾರಿ ಡಾ.ಶ್ರೀದೇವಿ ಬೊಬಾಟೆ ಇದ್ದರು.
ಶಿಬಿರದಲ್ಲಿ 26 ಮಂದಿ ಹಾಗೂ ಗೋವಾವಾಸ್ ಬಳಿಯ ಗೃಹ ಮಂಡಳಿ ಕಾಲೊನಿಯಲ್ಲಿ ನಡೆದ ಶಿಬಿರದಲ್ಲಿ 24 ಜನರು ಸ್ವಯಂಪ್ರೇರಿತರಾಗಿ ರಕ್ತ ದಾನ ಮಾಡಿದರು.
ಆಶಾ ಕಾರ್ಯಕರ್ತೆ ಸುಮನಾ ಕಾಂಬಳೆ ಪ್ರಾರ್ಥನಾ ಗೀತೆ ಹಾಡಿದರು. ಡಾ.ಸಂಜಯ ಡುಮ್ಮಗೋಳ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಅನಿಲ ಶಾ. ಕೊರಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಮೇಲ್ವಿಚಾರಕ ಸಿ.ಜಿ. ಅಗ್ನಿಹೋತ್ರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.