ಬೆಳಗಾವಿ: ‘ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವ ಬಿಲ್ಲವ ಸಮಾಜದವರ ಕಾರ್ಯ ಮೆಚ್ಚುಂವಥದು. ಮಕ್ಕಳಿಗೆ ಶಿಕ್ಷಣ ಅತ್ಯತ್ಯವಾಗಿದೆ’ ಎಂದು ಧಾರವಾಡ 2ನೇ ಜಿಲ್ಲಾ ಸೆಷನ್ಸ್ ನ್ಯಾಯಾಧೀಶೆ ಪಂಚಾಕ್ಷರಿ ಎಂ.ಸುವರ್ಣ ಹೇಳಿದರು.
ಇಲ್ಲಿನ ಶಹಾಪುರದ ವಿಜಯಲಕ್ಷ್ಮಿ ಸಭಾಭವನದಲ್ಲಿ ಬಿಲ್ಲವರ ಸಂಘದಿಂದ ಭಾನುವಾರ ಆಯೋಜಿಸಿದ್ದ 33ನೇ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಳಗಾವಿಯ ಬಿಲ್ಲವರ ಸಂಘದವರ ಸಮಾಜ ಸೇವೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ’ ಎಂದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ನಾರಾಯಣ ನಾಯ್ಕ್, ‘ಬ್ರಹ್ಮಶ್ರೀ ನಾರಾಯಣ ಗುರು ಆಶಯದಂತೆ ವಿದ್ಯೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉನ್ನತ ಹುದ್ದೆಗೆ ದಾರಿ ತೋರಿಸುವ ಜವಾಬ್ದಾರಿಯನ್ನು ಪಾಲಕರು ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
‘ಕೆಪಿಎಸ್ಸಿ, ಯುಪಿಎಸ್ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹಲವು ಸಂಘ–ಸಂಸ್ಥೆಗಳು ಉಚಿತವಾಗಿ ಕೋಚಿಂಗ್ ನೀಡುತ್ತಿವೆ. ಅದನ್ನು ಸಮಾಜದ ಮಕ್ಕಳು ಬಳಸಿಕೊಳ್ಳಬೇಕು. ಸರ್ಕಾರಿ ನೌಕರಿಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು’ ಎಂದು ತಿಳಿಸಿದರು.
ನ್ಯಾಯಾಧೀಶೆ ಪಂಚಾಕ್ಷರಿ ಸುವರ್ಣ ಹಾಗೂ ಸಂಘದ ಮಾಜಿ ಅಧ್ಯಕ್ಷ ಜಯಂತ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ವಿಜಯ ಸಾಲಿಯಾನ, ಹೋಟೆಲ್ ಉದ್ಯಮಿ ಸುಧೀರಕುಮಾರ ಸಾಲಿಯಾನ, ಸಂಘದ ಅಧ್ಯಕ್ಷ ಸುನೀಲ ಪೂಜಾರಿ, ಶಿವಗಿರಿ ಸೊಸೈಟಿ ಅಧ್ಯಕ್ಷೆ ಸುಜನ ಕುಮಾರ, ಉದ್ಯಮಿ ಪ್ರಭಾಕರ ಪೂಜಾರಿ, ಮುಖಂಡರಾದ ಚಂದ್ರಾವತಿ ಪೂಜಾರಿ, ಗಣೇಶ ಪೂಜಾರಿ, ಸುಂದರ ಕೋಟ್ಯಾನ್, ಸಂತೋಷ ಕೆ. ಪೂಜಾರಿ ಇದ್ದರು.
ಚಂದ್ರ ಪೂಜಾರಿ ನಿರೂಪಿಸಿದರು. ಸಂತೋಷ ಆರ್.ಪೂಜಾರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.