ADVERTISEMENT

ಕಾರ್ಯಕರ್ತರ ಸೇವೆಯಿಂದ ಬೆಳವಣಿಗೆ: ಆನಂದ ಮಾಮನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 13:39 IST
Last Updated 10 ಜುಲೈ 2021, 13:39 IST
ಬೆಳಗಾವಿಯಲ್ಲಿ ಶನಿವಾರ ನಡೆದ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಕಾರ್ಯಕಾರಿಣಿಯನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಕಾರ್ಯಕಾರಿಣಿಯನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು   

ಬೆಳಗಾವಿ: ‘ಬಿಜೆಪಿಯು ಪಕ್ಷದ ಕಾರ್ಯಕರ್ತರ ಸಹನೆ, ಸಹಕಾರ ಹಾಗೂ ನಿಸ್ವಾರ್ಥ ಸೇವೆಯಿಂದ ಬೆಳೆದಿದೆ’ ಎಂದುವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಇಲ್ಲಿನ ಗೋಮಟೇಶ ಸಭಾಭವನದಲ್ಲಿ ಶನಿವಾರ ನಡೆದ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ವರ್ಚುವಲ್ ಸಭೆ ಉದ್ಘಾಟಿಸಿ ಅವರು ಮತನಾಡಿದರು.

‘ಬಿಜೆಪಿಯು ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ. ಸಮರ್ಥ ಪಕ್ಷ ಎನ್ನುವುದು ಜಗಜ್ಜಾಹೀರಾಗಿದೆ. ಚುನಾವಣೆಗೆ ‌ಮಾತ್ರವೇ ಸೀಮಿತವಾಗದೆ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವುದು ನಮ್ಮ ಸಿದ್ಧಾಂತವಾಗಿದೆ’ ಎಂದರು.

ADVERTISEMENT

‘ಬಿಡುವಿಲ್ಲದೆ ದೇಶದ ಜನರ ಸೇವೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಕೋವಿಡ್-19 ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಕೋವಿಡ್ ಲಸಿಕೆಯ ಮೂಲಕ ಜನರಿಗೆ ಸುರಕ್ಷಾ ಕವಚ ನೀಡುತ್ತಿದೆ. ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಲ್ಲಲ್ಲಿ ಆರಂಭಿಸಲಾಗಿದೆ. ಸ್ವಾವಲಂಬಿ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣ ಮಾಡಿದ ಪ್ರಧಾನಿ ಕಾರ್ಯ ಶ್ಲಾಘನೀಯ’ ಎಂದು ತಿಳಿಸಿದರು.

ದಾಖಲೆಯಾಗಿದೆ:

ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೋವಿಡ್‌ ಹರಡದಂತೆ ತಡೆಗಟ್ಟಲು ದಿಟ್ಟ ಕ್ರಮ ತಗೆದುಕೊಂಡಿದೆ. ಮೃತರಾದ ಬಿಪಿಎಲ್ ಕುಟುಂಬದ ಒಬ್ಬರಿಗೆ ₹ 1 ಲಕ್ಷ ನೆರವು ಘೋಷಿಸಿರುವುದು ದಾಖಲೆಯಾಗಿದೆ. ಲಾಕ್‌ಡೌನ್‌ನಿಂದ ತತ್ತರಿಸಿದ ನೇಕಾರರು, ತರಕಾರಿ, ಹೂ ಬೆಳೆಗಾರರು, ರೈತರು, ಬೀದಿಬದಿ ವ್ಯಾಪಾರಿಗಳು, ಕಾರ್ಮಿಕರು ಮತ್ತು ಚಾಲಕರಿಗೆ ಪರಿಹಾರ ನೀಡಿ ಆಸರೆಯಾಗಿದ್ದಾರೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಅನೇಕರನ್ನು ಕಳೆದುಕೊಂಡು ದುಃಖದಲ್ಲಿದ್ದರೂ ಸಂಕಷ್ಟದಲ್ಲಿರುವ ಜನಸಾಮಾನ್ಯರ ಕಣ್ಣೀರು ಒರೆಸಲು ಸನ್ನದ್ಧರಾಗಲೇಬೇಕಾಗಿದೆ. ಪಕ್ಷದ ಕಾರ್ಯಕರ್ತರು ಕೋವಿಡ್ ಭೀತಿಯ ನಡುವೆಯೂ ಜೀವದ ಹಂಗು ತೊರೆದು ದಿನಸಿ ಕಿಟ್, ಸುರಕ್ಷಾ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಲಸಿಕಾ ಶಿಬಿರ ಆಯೋಜನೆಗೆ ಸಹಕರಿಸಿದ್ದಾರೆ’ ಎಂದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಉಜ್ವಲಾ ಬಡವನಾಚೆ, ಮಹೇಶ ಮೋಹಿತೆ, ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ ವಿವಿಧ ಗೋಷ್ಠಿಯಲ್ಲಿ ಮಾರ್ಗದರ್ಶನ ನೀಡಿದರು.

ಮುಖಂಡರಾದ ಶಶಿಕಾಂತ ನಾಯ್ಕ, ಯುವರಾಜ ಜಾಧವ, ಪ್ರೇಮಾ ಭಂಡಾರಿ, ಬಸವರಾಜ ಹಿರೇಮಠ, ಗುರು ಮೆಟಗುಡ್, ಸಂಜಯ ಕಂಚಿ, ಮುತ್ತೆಪ್ಪ ಮನ್ನಾಪೂರ, ಪ್ರಮೋದ ಕೊಚೇರಿ, ಶ್ಯಾಮಾನಂದ ಪೂಜಾರ, ಸಂತೋಷ ದೇಶನೂರ, ವೀರಭದ್ರಯ್ಯ ಪೂಜಾರ, ವಾಸಂತಿ ಬಡಿಗೇರ, ಮಾರುತಿ ಕೊಪ್ಪದ, ರಂಜನಾ ಕೊಲಕಾರ, ಮಲ್ಲೆಶ್ವರ ಸುಳೇಭಾಂವಿ ಪಾಲ್ಗೊಂಡಿದ್ದರು.

ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ ನಿರೂಪಿಸಿದರು. ರತ್ನಾ ಗೋಧಿ ವಂದಿಸಿದರು.

ಸಲ್ಲುತ್ತದೆ

ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ಮೌಲ್ಯ ಮರೆದ ಕೀರ್ತಿ ನಮ್ಮ ಕಾರ್ಯಕರ್ತರಿಗೆ ಸಲ್ಲುತ್ತದೆ.

– ಸಂಜಯ ಪಾಟೀಲ, ಅಧ್ಯಕ್ಷ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.