ಬೆಳಗಾವಿ: ‘ಬೆಳಗಾವಿಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಮೂವರು ಪ್ರಬಲರು ಕಣದಲ್ಲಿದ್ದಾರೆ. ಬಿಜೆಪಿ ಗೆಲ್ಲಬೇಕು, ಕಾಂಗ್ರೆಸ್ ಸೋಲಬೇಕು ಎನ್ನುವುದೇ ನಮ್ಮ ಗುರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಲಖನ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದರು. ಈಗ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ನಮ್ಮೆಲ್ಲ ಶಾಸಕರು, ಸಂಸದರು, ಪದಾಧಿಕಾರಿಗಳು ಸೇರಿ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ತೀರ್ಮಾನ ಮಾಡಿದ್ದೇವೆ. ಇದೇ ನಮ್ಮ ಅಧಿಕೃತ ನಿರ್ಣಯ’ ಎಂದು ಪ್ರತಿಕ್ರಿಯಿಸಿದರು.
‘2ನೇ ಪ್ರಾಶಸ್ತ್ಯದ ಮತದ ಬಗ್ಗೆ ಗೊಂದಲ ಇದೆಯಲ್ಲಾ’ ಎಂಬ ಪ್ರಶ್ನೆಗೆ, ‘ಮತದಾರರು ಗುಪ್ತವಾಗಿ ಮತ ಹಾಕುತ್ತಾರೆ. ಅದನ್ನು ನಾವು–ನೀವು ಚರ್ಚೆ ಮಾಡಕ್ಕಾಗುತ್ತಾ? ಯಾರೇನು ಮಾಡುತ್ತಾರೆ ಎನ್ನುವುದು ಅಪ್ರಸ್ತುತ. ಈಗಿರುವುದು ತ್ರಿಕೋನ ಸ್ಪರ್ಧೆ. ನಮ್ಮ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ನಮ್ಮ ಆದ್ಯತೆ ಇದೆ’ ಎಂದರು.
‘ರಾಜ್ಯದಾದ್ಯಂತ ಕಾಂಗ್ರೆಸ್ ವಿರುದ್ಧ ರಾಜಕಾರಣ ಮಾಡುತ್ತಿದ್ದೇವೆ. ಹೀಗಿರುವಾಗ, ಕಾಂಗ್ರೆಸ್ ಸೋಲಿಸಿ ಎನ್ನದೇ ಗೆಲ್ಲಿಸಿ ಎನ್ನಲಾಗುತ್ತದೆಯೇ?’ ಎಂದು ನಗುನಗುತ್ತಲೇ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.