
ಬೆಳಗಾವಿ: ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಇರುವ ಏಳು ಕೃಷ್ಣಮೃಗಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದೆ.
ಕಳೆದ ಮೂರು ದಿನಗಳಿಂದ ಪ್ರಾಣಿಗಳ ಸಾವಿನ ಪ್ರಕರಣ ವರದಿಯಾಗಿಲ್ಲ. ಪರಿಸ್ಥಿತಿ ಹತೋಟಿಗೆ ಬರುತ್ತಿರುವ ಕಾರಣ, ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಗಳಲೆ ರೋಗದಿಂದ (ಇಂಡೀಡ್ ಹೆಮರೈಜಿಕ್ ಸೆಪ್ಟೀಸಿಮಿಯಾ) ಕಿರು ಮೃಗಾಲಯದಲ್ಲಿದ್ದ 31 ಕೃಷ್ಣಮೃಗಗಳು ಸಾವನ್ನಪ್ಪಿವೆ. ಈಗ ಬದುಕುಳಿದ ಏಳು ಪ್ರಾಣಿಗಳು ಎಂದಿನಂತೆ ಗುರುವಾರ ಆಹಾರ ಸೇವಿಸಿ ಲವಲವಿಕೆಯಿಂದ ಓಡಾಡಿದವು.
ಬೆಂಗಳೂರಿನಿಂದ ಬಂದಿರುವ ತಜ್ಞರ ತಂಡ ಇಲ್ಲಿಯೇ ಬೀಡುಬಿಟ್ಟು, ಕೃಷ್ಣಮೃಗಗಳಿಗೆ ಔಷಧೋಪಚಾರ ಮಾಡುತ್ತಿದೆ.
‘ಏಳು ಕೃಷ್ಣಮೃಗಗಳು ಸೋಂಕಿಗೆ ಒಳಗಾಗಿದ್ದು, 10 ದಿನ ಅವುಗಳ ಮೇಲೆ ನಿಗಾ ಇರಿಸುವಂತೆ ನಿರ್ದೇಶನ ನೀಡಲಾಗಿದೆ. ಐದು ದಿನಗಳಿಂದ ಅವು ಆರೈಕೆಗೆ ಸ್ಪಂದಿಸುತ್ತಿದ್ದು, ನ.25ರವರೆಗೆ ನಿಗಾ ಇರಿಸುತ್ತೇವೆ. ದಿನದಿಂದ ದಿನಕ್ಕೆ ಅವುಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಸೋಂಕು ಹರಡದಂತೆ ತಡೆಯಲು ಎಲ್ಲ ರೀತಿಯ ಕ್ರಮ ವಹಿಸಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ಪವನ ಕುರನಿಂಗ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸುತ್ತಲಿನ ಗ್ರಾಮಗಳಲ್ಲಿ ಎಚ್ಚರಿಕೆ
‘ಹೆಮರೈಜಿಕ್ ಸೆಪ್ಟೀಸಿಮಿಯಾ ಸೋಂಕು ಸಸ್ಯಾಹಾರಿ ಪ್ರಾಣಿಗಳಿಗೆ ಮಾತ್ರ ಬರುತ್ತದೆ. ಇದು ಗಾಳಿಯಲ್ಲಿ ಹರಡುವುದು ಸಾಮಾನ್ಯ. ಮನುಷ್ಯರು ಅಥವಾ ಪ್ರಾಣಿಗಳ ದೇಹಕ್ಕೆ ಅಂಟಿಕೊಂಡು ಅದರ ಮೂಲಕವೂ ಇತರ ಜಾನುವಾರುಗಳಿಗೆ ತಗಲುವ ಸಾಧ್ಯತೆ ಇದೆ’ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಹೀಗಾಗಿ, ಈ ಮೃಗಾಲಯದ ಸುತ್ತಲಿನ ಗ್ರಾಮಗಳಲ್ಲೂ ಎಚ್ಚರ ವಹಿಸುವಂತೆ ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಮುನ್ಸೂಚನೆ ನೀಡಲಾಗಿದೆ. ಜಾನುವಾರುಗಳನ್ನು ಮೃಗಾಲಯದ ಆಸುಪಾಸು ಬಿಡದಂತೆ ಗ್ರಾಮಗಳಲ್ಲಿ ತಿಳಿವಳಿಕೆ ನೀಡಲಾಗಿದೆ' ಎಂದು ಡಿಸಿಎಫ್ ಎನ್.ಇ.ಕ್ರಾಂತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.