ADVERTISEMENT

3ನೇ ದಿನವೂ ಮುಷ್ಕರ ಮುಂದುವರಿಕೆ

ತಲೆ ಮೇಲೆ ಇಟ್ಟಿಗೆ ಇಟ್ಟುಕೊಂಡು ಪ್ರತಿಭಟಿಸಿದ ನೌಕರರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 15:27 IST
Last Updated 13 ಡಿಸೆಂಬರ್ 2020, 15:27 IST
ಬೆಳಗಾವಿಯಲ್ಲಿ ಸಾರಿಗೆ ನೌಕರರು ತಮ್ಮ ಮಕ್ಕಳೊಂದಿಗೆ ಅರೆಬೆತ್ತಲೆಯಾಗಿ ತಲೆ ಮೇಲೆ ಇಟ್ಟಿಗೆಗಳನ್ನು ಇಟ್ಟುಕೊಂಡು ಭಾನುವಾರ ಮುಷ್ಕರದಲ್ಲಿ ಭಾಗಿಯಾದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯಲ್ಲಿ ಸಾರಿಗೆ ನೌಕರರು ತಮ್ಮ ಮಕ್ಕಳೊಂದಿಗೆ ಅರೆಬೆತ್ತಲೆಯಾಗಿ ತಲೆ ಮೇಲೆ ಇಟ್ಟಿಗೆಗಳನ್ನು ಇಟ್ಟುಕೊಂಡು ಭಾನುವಾರ ಮುಷ್ಕರದಲ್ಲಿ ಭಾಗಿಯಾದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಬಸ್‌ಗಳ ಕಾರ್ಯಾಚರಣೆ ಭಾನುವಾರ ಸಂಜೆಯಿಂದ ಆರಂಭಗೊಂಡಿತು.

ನೌಕರರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೌಕರರ ಕರ್ತವ್ಯಕ್ಕೆ ಮರಳಿದರು. ಮೂರು ದಿನಗಳಿಂದನಡೆಸುತ್ತಿದ್ದ ಮುಷ್ಕರ ಕೈಬಿಟ್ಟರು. ಹೀಗಾಗಿ, ಬಸ್‌ಗಳ ಕಾರ್ಯಾಚರಣೆ ಆರಂಭವಾಯಿತು. ‘ಸಂಜೆಯ ವೇಳೆ ನಿಗದಿತ ಬಸ್‌ಗಳು ಕಾರ್ಯಾಚರಣೆ ಆರಂಭಿಸಿವೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ನೌಕರರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಷ್ಕರ ನಡೆಸಿದರು.ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೆಲಸದಿಂದ ದೂರ ಉಳಿದು ಮುಷ್ಕರ ಮುಂದುವರಿಸಿದ್ದರು. ಅವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ರಾಜ್ಯ ರೈತ ಸಂಘಟನೆಯ ನಾಯಕರು ಬೆಂಬಲ ನೀಡಿದರು.

ADVERTISEMENT

ನಿಲ್ದಾಣದಲ್ಲಿದ್ದ ಬಸ್‌ಗಳನ್ನು ಶನಿವಾರ ತಡರಾತ್ರಿ ಡಿಪೊಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಚಾಲಕರು, ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಭಾನುವಾರ ಸಂಜೆವರೆಗೂ ನಗರ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳು ಕಂಡುಬರಲಿಲ್ಲ. ಜೊತೆಗೆ, ಬಸ್‌ಗಳ ಸಂಚಾರ ಸ್ತಬ್ಧಗೊಂಡಿದ್ದ ಮಾಹಿತಿ ಇದ್ದಿದ್ದರಿಂದ, ಪ್ರಯಾಣಿಕರು ಕೂಡ ನಿಲ್ದಾಣಗಳತ್ತ ಸುಳಿಯಲಿಲ್ಲ. ರಜಾ ದಿನವೂ ಆಗಿದ್ದರಿಂದ ವಿಟಿಯು, ಆರ್‌ಸಿಯು ಕ್ಯಾಂಪಸ್ ಹಾಗೂ ವಿವಿಧ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬಸ್‌ ನಿಲ್ದಾಣಗಳತ್ತ ಬೆಳಿಗ್ಗೆ ಬರಲಿಲ್ಲ. ಇದರಿಂದಾಗಿ ನಿಲ್ದಾಣ ಬಿಕೋ ಎನ್ನುತ್ತಿತ್ತು. ತುರ್ತು ಕೆಲಸಗಳಿಗೆಂದು ಪ್ರಯಾಣ ಮಾಡಲೇಬೇಕಾದವರು ಖಾಸಗಿ ವಾಹನಗಳ ಮೊರೆ ಹೋದರು.

ಸಂಜೆ ನಂತರ ಬಸ್‌ ಕಾರ್ಯಾಚರಣೆ ಆರಂಭವಾದ್ದರಿಂದ ನಿಲ್ದಾಣ ಕಳೆಗಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.