ADVERTISEMENT

ರೈತರ ಹಿತ ಕಾಯುವ ಕಾಯ್ದೆಗಳು

ಕೇಂದ್ರದ ಕ್ರಮಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 15:50 IST
Last Updated 6 ಮಾರ್ಚ್ 2021, 15:50 IST
ಮುಗಳಖೋಡದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ ರೈತ ಜಾಗೃತಿ ಅಭಿಯಾನದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು
ಮುಗಳಖೋಡದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ ರೈತ ಜಾಗೃತಿ ಅಭಿಯಾನದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು   

ಮುಗಳಖೋಡ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ರೈತರ ಹಿತಾಸಕ್ತಿ ಆಧರಿಸಿ ಜಾರಿಗೆ ತಂದಿದೆ’ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಬಿಜೆಪಿಯಿಂದ ಇಲ್ಲಿನ ಉಣ್ಣಿ ಬಸವೇಶ್ವರ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತ ಮೋರ್ಚಾ ಕಾರ್ಯಕಾರಿಣಿ ಮತ್ತು ರೈತ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಅನಿಶ್ಚಿತ ವರಮಾನದೊಂದಿಗೆ ರೈತ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾನೆ. ಸರ್ಕಾರದ ವರದಿ ಪ್ರಕಾರ ಒಬ್ಬ ರೈತನಿಗೆ ವಾರ್ಷಿಕ ವರಮಾನ ₹ 70ಸಾವಿರ ಮಾತ್ರ ಇದೆ. ಅದನ್ನು ಹೆಚ್ಚಿಸುವುದಕ್ಕಾಗಿ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.

ADVERTISEMENT

‘ಕಾಂಗ್ರೆಸ್ ಸರ್ಕಾರವಿದ್ದಾಗ ಶೇ 11ರಷ್ಟಿದ್ದ ಜಿಡಿಪಿ ಇತ್ತು ನಮ್ಮ ಸರ್ಕಾರದ ಅವಧಿಯಲ್ಲಿ ಶೇ 16ಕ್ಕೆ ಏರಿದೆ. ಡಾ.ಎಂ.ಎಸ್. ಸ್ವಾಮಿನಾಥನ್ ಅವರು ಬೀಜ್‌ ಸೇ ಬಜಾರ್‌ ತಕ್ ಎಂಬ ವರದಿಯನ್ನು ಕೊಟ್ಟರೂ ಆಗಿನ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಲಿಲ್ಲ. ನಮ್ಮ ಸರ್ಕಾರವು ರೈತರ ಆದಾಯ ದ್ವಿಗುಣಗೊಳಿಸಲು ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದರು.

ಅನುಕೂಲಕ್ಕಾಗಿ:

‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ ಅನುಕೂಲಕ್ಕೆ ತಕ್ಕಂತೆ ವಿವಿಧ ಕಾಯ್ದೆಗಳನ್ನು ತರಲಾಗಿದೆ. ಕಿಸಾನ್ ಸಮ್ಮಾನ್‌ ಯೋಜನೆಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಈವರೆಗೆ ₹ 75ಸಾವಿರ ಕೋಟಿ ನೀಡಲಾಗಿದೆ. 2019ರ ಲೋಕಸಭಾ ಚುಣಾವಣೆ ಪ್ರಣಾಳಿಕೆಯಲ್ಲಿ, ಕೃಷಿ ಕಾಯ್ದೆ ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷ ವಾಗ್ದಾನ ಮಾಡಿತ್ತು. ಆದರೆ, ಈ ವಿರೋಧಿಸುತ್ತಿದೆ. ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ಗೌರವಿಸುತ್ತೇವೆ. ಅವರನ್ನು ನಾವು 11 ಬಾರಿ ಮಾತುಕತೆಗೆ ಕರೆದಿದ್ದೇವೆ. ಆದರೆ, ಕಾಯ್ದೆಗಳನ್ನು ವಿರೋಧಿಸುವುದಕ್ಕೆ ಅವರ ಬಳಿ ಸ್ಪಷ್ಟ ಕಾರಣಗಳಿಲ್ಲ’ ಎಂದು ಹೇಳಿದರು.

ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಲತಾ ಹುದ್ದಾರ, ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ನಾಯಿಕ, ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಕುಡಚಿ ಮಂಡಲ ಅಧ್ಯಕ ಮಲ್ಲಿಕಾರ್ಜುನ ಖಾನಗೌಡರ, ಕುಡಚಿ ಅಧ್ಯಕ್ಷ ಕೆಂಪಣ್ಣ ಅಂಗಡಿ, ಮುಖಂಡರಾದ ಬಸನಗೌಡ ಆಸಂಗಿ, ಗೌಡಪ್ಪ ಖೇತಗೌಡರ, ಮಾರುತಿ ಕಲ್ಯಾಣಕರ, ರಾಜು ಐತವಾಡೆ, ಮಹಾವೀರ ನಾಶಿಪುಡಿ, ಮಲ್ಲಿಕಾರ್ಜುನ ತೇಲಿ, ನಿಂಗಪ್ಪ ಪಕಾಂಡೆ ಇದ್ದರು.

ಡಿ.ಬಿ. ಠಕ್ಕನ್ನವರ ನಿರೂಪಿಸಿದರು. ಕೆಂಪಣ್ಣ ಅಂಗಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.