
ಅಥಣಿ: ದೇಶದಲ್ಲಿ ಜನಿಸಿದ ಅನೇಕ ಮಹಾತ್ಮರು ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮ ಪರಂಪರೆಯ ಮೂಲಕ ಜಗತ್ಪ್ರಸಿದ್ದಿ ಹೊಂದಿದ್ದಾರೆ. ಅವರ ಬದುಕಿನ ಆದರ್ಶಗಳೇ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿವೆ ಎಂದು ನದಿ ಇಂಗಳಗಾವದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಮೋಟಗಿ ಮಠದ ಲಿಂ.ಚನ್ನಬಸವ ಶಿವಯೋಗಿಗಳ 101ನೇ ಸ್ಮರಣೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮೋಟಗಿಮಠದ ಗುರು ಪರಂಪರೆಯಲ್ಲಿ ಚನ್ನಬಸವ ಶಿವಯೋಗಿಗಳು ಮತ್ತು ಮುರುಘೇಂದ್ರ ಶಿವಯೋಗಿಗಳು ತಮ್ಮ ಬದುಕಿನಲ್ಲಿ ಮಾಡಿದ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳು ನಮ್ಮೆಲ್ಲರಿಗೆ ದಾರಿದೀಪವಾಗಿವೆ. ಅವರ ಸ್ಮರಣೆಯ ಜೊತೆಗೆ ಅಧ್ಯಾತ್ಮಿಕ ಪ್ರವಚನ ಆಲಿಸುವುದರಿಂದ ನಮ್ಮೆಲ್ಲರ ಬದುಕು ಸುಂದರವಾಗುತ್ತದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ ಅಥಣಿಯ ಮೋಟಗಿಮಠವು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ, ಇಲ್ಲಿ ಬಸವ ಸಂಸ್ಕೃತಿಯ ಉತ್ಸವದ ಜೊತೆಗೆ ಕನ್ನಡ ನಾಡು-ನುಡಿ ಸಾಹಿತ್ಯ - ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದ ಪರಂಪರೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ಯೋಗಿರಾಜೇಂದ್ರ ಶಾಸ್ತ್ರಿಗಳು ಆಶೀರ್ವಚನ ನೀಡಿದರು. ಹಿರಿಯರಾದ ಮುರಿಗೆಪ್ಪ ತೊದಲಬಾಗಿ, ಶಂಕರ ಹಗಲoಬಿ, ಮುರಿಗೆಪ್ಪ ಮಮದಾಪುರ, ರಮೇಶ ಕಾಗಲೆ, ವೈಶಾಲಿ ಮಠಪತಿ, ಸುನಿತಾ ಮೆಣಸಿ, ಶಿವಲೀಲಾ ಪಟ್ಟಣಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ.ಡಿ. ತೊದಲಬಾಗಿ ಸ್ವಾಗತಿಸಿದರು. ಶಶಿಧರ ಬರ್ಲಿ ನಿರೂಪಿಸಿದರು. ವೈಶಾಲಿ ಮಠಪತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.