ADVERTISEMENT

ಚಯನೀತ ತಂಡಕ್ಕೆ 14ನೇ ಪ್ರೇರಣಾ ಪುರಸ್ಕಾರ ಪ್ರದಾನ

ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡ ಪ್ರೇರಣಾ ಉತ್ಸವ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 2:40 IST
Last Updated 30 ಡಿಸೆಂಬರ್ 2025, 2:40 IST
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ್ದ 14ನೇ ಪ್ರೇರಣಾ ಮುಖ್ಯ ಪುರಸ್ಕಾರವನ್ನು ನವದೆಹಲಿಯ ಬುದ್ಧಿಮಾಂಧ್ಯ ಮಕ್ಕಳನ್ನು ಒಳಗೊಂಡ ಚಯನೀತ ತಂಡಕ್ಕೆ ಚಂದ್ರಶೇಖರ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಸೇರಿದಂತೆ ಇತರರು ಪ್ರದಾನ ಮಾಡಿದರು
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ್ದ 14ನೇ ಪ್ರೇರಣಾ ಮುಖ್ಯ ಪುರಸ್ಕಾರವನ್ನು ನವದೆಹಲಿಯ ಬುದ್ಧಿಮಾಂಧ್ಯ ಮಕ್ಕಳನ್ನು ಒಳಗೊಂಡ ಚಯನೀತ ತಂಡಕ್ಕೆ ಚಂದ್ರಶೇಖರ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಸೇರಿದಂತೆ ಇತರರು ಪ್ರದಾನ ಮಾಡಿದರು   

ಚಿಕ್ಕೋಡಿ: ‘ಭಾವನೆಗಳಿಂದ ಭಾರತವಾಗಿದೆ ಎಂಬುದಕ್ಕೆ ಜಗತ್ತಿನಲ್ಲಿ ಭಾರತೀಯರು ನೇತೃತ್ವ, ಕರ್ತೃತ್ವ ಹಾಗೂ ಮಾತೃತ್ವಕ್ಕೆ ಹೆಚ್ಚಿನ ಮಾನ್ಯತೆ ನೀಡಿರುವುದೇ ಇದಕ್ಕೆ ನಿದರ್ಶನವಾಗಿದೆ’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ 14ನೇ ಪ್ರೇರಣಾ ಉತ್ಸವದಲ್ಲಿ ಭಾನುವಾರ ಭಾಗಿಯಾಗಿ 2025ನೇ ಸಾಲಿನ ಪ್ರೇರಣಾ ಪುರಸ್ಕಾರವನ್ನು ಸಾಧಕರಿಗೆ ಪ್ರದಾನ ಮಾಡಿ ಮಾತನಾಡಿದರು.

‘ನೊಂದವರಿಗೆ, ಬೆಂದವರಿಗೆ ಬಂಧುವಾಗಿ ನಿಲ್ಲುವಂತಹದು ಧರ್ಮವಾಗಿದೆ. ಹುಟ್ಟುಹಬ್ಬಗಳು ಉತ್ಸವಗಳಾಗಬೇಕು. ಎಲ್ಲರಿಗೂ ಪ್ರೇರಣೆಯಾಗಬೇಕು. ಅಂತಹ ಪ್ರೇರಣೆ ನೀಡುವ ಕಾರ್ಯವನ್ನು ಜೊಲ್ಲೆ ದಂಪತಿ ಮಾಡುತ್ತಾ ಬಂದಿರುವುದು ಶ್ಲಾಘನೀಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ಬುದ್ಧಿಮಾಂಧ್ಯ ಮಕ್ಕಳ ನೋವು ಅರ್ಥ ಮಾಡಿಕೊಳ್ಳುವ ಮಾತೃಹೃದಯಗಳು ಬೇಕಾಗಿವೆ. ತಾಯಂದಿರರು ತಮ್ಮ ಮಕ್ಕಳನ್ನು ಜೋಪಾನದಿಂದ ಸಾಕಬೇಕು. ಆಗಲೇ ಮಾತೃತ್ವಕ್ಕೆ ಹಿರಿಮೆ ಬರಲು ಸಾಧ್ಯವಿದೆ. ವಿಶೇಷ ಚೇತನ ಮಕ್ಕಳನ್ನು ಯಾರೂ ಅಲ್ಲಗಳೆಯಬಾರದು. ಅಂತಹ ಒಳ್ಳೆಯ ಗುಣ ಬೆಳೆಸಿಕೊಂಡಿದ್ದರಿಂದಲೇ ನಮ್ಮ ಬಾಳು ಬಂಗಾರವಾಗಿದೆ’ ಎಂದು ಹೆಮ್ಮೆಪಟ್ಟರು.

ಈ ಸಂದರ್ಭದಲ್ಲಿ ಆಶಾಜ್ಯೋತಿ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನಾಚರಣೆ ನಿಮಿತ್ತ ನೀಡುವ 2025ನೇ ಸಾಲಿನ ₹51 ಸಾವಿರ ಮೊತ್ತದ ಮುಖ್ಯ ಪ್ರೇರಣಾ ಪುರಸ್ಕಾರವನ್ನು ಬುದ್ಧಿಮಾಂಧ್ಯ ಮಕ್ಕಳನ್ನು ಒಳಗೊಂಡ ನವದೆಹಲಿಯ ಚಯನೀತ ಫೌಂಡೇಷನ್ ಬ್ಯಾಂಡ್ ತಂಡದ ಚಯನ ತನೀಜಾ, ಇಶಾನ ಪ್ರತಾಪಸಿಂಗ್, ಕೆವಿನ್ ಮಿಚೆಲ್, ಶ್ರೇಯಂ ಶ್ರೀವರ್ಧನ, ಶ್ರೇಯಂ ಚಕ್ರವರ್ತಿ, ಕೋಚ್ ಸಂದೀಪ ಪಾಲ್ ಅವರಿಗೆ ನೀಡಲಾಯಿತು.

ರಾಜೇಂದ್ರ ಪಾಟೀಲ-ಸಹಕಾರ ಕ್ಷೇತ್ರ, ಸುರೇಶ ಪಾಟೀಲ-ಕೃಷಿ ಕ್ಷೇತ್ರ, ಶ್ರೇಯಲ ಶಹಾ- ಸಾಂಸ್ಕೃತಿಕ ಕ್ಷೇತ್ರ, ಯುವರಾಜ ಪಾಟೀಲ-ಶಿಕ್ಷಣ ಕ್ಷೇತ್ರ, ನಿಜಪ್ಪ ಹಿರೇಮನಿ-ಸಮಾಜಸೇವೆ, ಶ್ರೀಧರ ಮಾಳಗಿ-ಯುವ ಸಾಧನೆ, ಗುರುದೇವಿ ಹುಲೆಪ್ಪನವರಮಠ-ಆಧ್ಯಾತ್ಮಿಕ ಕ್ಷೇತ್ರ, ಮಹೇಶ ಅಂಗಡಿ-ಕ್ರೀಡೆ, ಸುಭಾಷ ದಲಾಲ-ಮಾಧ್ಯಮ ಕ್ಷೇತ್ರದಲ್ಲಿ 2025ನೇ ಸಾಲಿನ ಪ್ರೇರಣಾ ಪುರಸ್ಕಾರ ಪ್ರಶಸ್ತಿಗೆ ಭಾಜನಾರಿಗಿದ್ದು, ಇವರಿಗೆ ತಲಾ ₹11 ಸಾವಿರ ನಗದು ಹಾಗೂ ಪ್ರಮಾಣ ಪತ್ರದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿಪ್ಪಾಣಿಯ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಸಂಕೇಶ್ವರದ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ, ಪರಮಾನಂದವಾಡಿಯ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಕ, ಅಶೋಕ ಸಾಧನಕರ, ರಾಜೇಂದ್ರ ಪಾಟೀಲ, ಸತ್ಯಕ್ಕ ಸಾಧನಕರ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.