
ಹಿರೇಕೋಡಿ ಗ್ರಾಮದ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಮನೆಯಿಂದ ತಂದಿರುವ ತಿಂಡಿ ತಿನಿಸುಗಳನ್ನು ಸಂಗ್ರಹಿಸಲಾಗಿತ್ತು
ಚಿಕ್ಕೋಡಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನಿರ್ಮಿಸಿದ ತಾಲ್ಲೂಕಿನ ಹಿರೇಕೋಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ತಲೆದೋರುತ್ತಿವೆ. ಸ್ವತಃ ನ್ಯಾಯಾಧೀಶರು ಭೇಟಿ ನೀಡಿ, ಎಚ್ಚರಿಕೆ ಕೊಟ್ಟ ಮೇಲೂ ಇಲ್ಲಿನ ವ್ಯವಸ್ಥೆ ಸುಧಾರಣೆ ಕಂಡಿಲ್ಲ.
2014ರಲ್ಲಿ 10 ಎಕರೆಯಲ್ಲಿ ತಲೆಎತ್ತಿದ ಈ ವಸತಿ ಶಾಲೆ ಕೆಲವು ವರ್ಷಗಳಿಂದ ಒಂದಿಲ್ಲದು ಸಮಸ್ಯೆಗೆ ಒಳಗಾಗುತ್ತಿದೆ. ಸೆಪ್ಟೆಂಬರ್ನಲ್ಲಿ ಉಪಾಹಾರ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಬೆನ್ನಲ್ಲೇ ಇದೀಗ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾತ್ರಿ ಊಟ ಸೇವಿಸಿ ಅಸ್ವಸ್ಥಗೊಂಡಿದ್ದರು.
ಪ್ರಸಕ್ತ ಸಾಲಿನಲ್ಲಿ 6-10ನೇ ತರಗತಿಯವರೆಗೆ 224 ಬಾಲಕರು, 204 ಬಾಲಕಿಯರು ಸೇರಿದಂತೆ 428 ಹಾಗೂ ಪಿಯುಸಿಯಲ್ಲಿ 192 ಬಾಲಕಿಯರು ಓದುತ್ತಿದ್ದಾರೆ. 10 ಶಿಕ್ಷಕರು ಹಾಗೂ 4 ಅತಿಥಿ ಶಿಕ್ಷಕರಿದ್ದು, ಗುಣಮಟ್ಟದ ಕಲಿಕೆಗೆ ವಸತಿ ಶಾಲೆ ಹೆಸರಾಗಿದೆ. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ಶಾಲೆಯು ಉನ್ನತೀಕರಣಗೊಂಡಿದೆ. 6ನೇ ತರಗತಿಗೆ ಇದ್ದ 60 ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು 120ಕ್ಕೆ ವಿಸ್ತರಿಸಲಾಗಿದೆ. ಹೀಗಾಗಿ ಮೊದಲ ಹಂತವಾಗಿ ₹ 8.82 ಕೋಟಿ ಅನುದಾನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ವಸತಿ ಶಾಲೆಯ ಸುತ್ತಲೂ ಕಾಂಪೌಂಡ್ ಇದ್ದು, ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವಷ್ಟು ಶಿಕ್ಷಕರು, ಕೊಠಡಿಗಳು, ಕಂಪ್ಯೂಟರ್, ಪ್ರಯೋಗಾಲಯ, ಗ್ರಂಥಾಲಯ ಮುಂತಾದ ಸೌಕರ್ಯಗಳಿದ್ದರೂ ವಿದ್ಯಾರ್ಥಿಗಳು ಮೇಲಿಂದ ಮೇಲೆ ವಾಂತಿ ಬೇಧಿಯಿಂದ ಬಳಲುವ ಪ್ರಕರಣಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಸೆ.12ರಂದು ಬೆಳಿಗಿನ ಉಪಾಹಾರ ಸೇವಿಸಿ 129 ವಿದ್ಯಾರ್ಥಿಗಳು ಅಸ್ವಸ್ಥಗೊಂಡು 2-3 ದಿನಗಳಲ್ಲಿ ಚೇತರಿಕೆ ಹೊಂದಿದರು. ಇದೀಗ ನ.2ರಂದು ರಾತ್ರಿ ಊಟ ಮಾಡಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ.
ಸೆ.12ರಂದು ನಡೆದ ಪ್ರಕರಣದ ಹಿನ್ನೆಲೆಯಲ್ಲಿ ವಸತಿ ಶಾಲೆಯ ಪ್ರಾಚಾರ್ಯ, ನಿಲಯ ಮೇಲ್ವಿಚಾರಕರು ಹಾಗೂ 6 ಜನ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಕಳೆದ 15 ದಿನಗಳ ಹಿಂದಷ್ಟೇ ನ್ಯಾಯಾಧೀಶರು ಹಾಗೂ ಉಪ ವಿಭಾಗಾಧಿಕಾರಿ ವಸತಿ ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿದಾಗ ಕೊಳೆತ ಬಾಳೆಹಣ್ಣು ಹಾಗೂ ತರಕಾರಿ ಪತ್ತೆಯಾಗಿದ್ದು, ಉಡವೊಂದು ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡಿತ್ತು. ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ನ್ಯಾಯಾಧೀಶರು ಹಾಗೂ ಅಧಿಕಾರಿಗಳು ಕಿಡಿ ಕಾರಿದ್ದರು.
ಹೊರಗಿನ ಊಟ, ತಿಂಡಿಗಳಿಂದ ಮಕ್ಕಳ ಆರೋಗ್ಯ ಕೆಡುತ್ತದೆ. ಆದ್ದರಿಂದ ಯಾರೂ ತಿಂಡಿ ತರಬೇಡಿ ಎಂದು ನಿಯಮ ಮಾಡಲಾಗಿದೆ. ಆದರೆ, ಅಧಿಕಾರಿಗಳು ಭೇಟಿ ನೀಡಿದಾಗ ಬಹುಪಾಲು ವಿದ್ಯಾರ್ಥಿಗಳ ಬಳಿ ತಿಂಡಿಗಳು ಕಂಡುಬಂದವು.
ಇದೆಲ್ಲ ಸಮಸ್ಯೆಗಳನ್ನು ನೀಗಿಸಿ, ಮಕ್ಕಳಿಗೆ ನಿರ್ಭಯ ಯಾಗೂ ಆರೋಗ್ಯವಂತ ವಾತಾವರಣ ನಿರ್ಮಿಸುವಲ್ಲಿ ಅಧಿಕಾರಿಗಳು ಆಸಕ್ತಿ ವಹಿಸಿಲ್ಲ ಎಂದು ಪಾಲಕರು ದೂರಿದ್ದಾರೆ.
ಈ ಶಾಲೆಯಲ್ಲಿ ಸುಸಜ್ಜಿತ ಅಡುಗೆ ಕೋಣೆ ವಾತಾವರಣ ಇದೆ. ಇಲ್ಲಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಮನಸ್ಸು ಆಗುವುದಿಲ್ಲಸುರೇಂದ್ರ ಆಲಗೂರೆ ಪಾಲಕ ಅಥಣಿ
ಕುಡಿಯಲು ಶುದ್ಧ ನೀರು ಲಭ್ಯವಿದ್ದು ಉತ್ತಮ ಆಹಾರ ನೀಡಲಾಗುತ್ತಿದೆ. ಕೆಲವರಿಗೆ ಸಹಜವಾಗಿಯೂ ವಾಂತಿ ಭೇದಿಯಾಗಿರಬಹುದು. ಎಲ್ಲರಿಗೂ ತೊಂದರೆಯಾಗಿಲ್ಲರೋಹಿಣಿ ಪಾಟೀಲ ವಸತಿ ಶಾಲೆಯ ವಿದ್ಯಾರ್ಥಿನಿ
ಅಧಿಕಾರಿಗಳು ಸೂಚಿಸಿದ ನಿಯಮಗಳಂತೆಯೇ ಅಡುಗೆ ತಯಾರಿಸಲಾಗುತ್ತಿದ್ದು ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆರಾಜಶ್ರೀ ಸಲಗರೆ ವಾರ್ಡನ್
ಈ ಮೊದಲಿನ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಅಡುಗೆ ಸಿಬ್ಬಂದಿಯು ನಿಯಮಾನುಸಾರ ಧಾನ್ಯ ಸಂಸ್ಕರಿಸಿ ತರಕಾರಿ ತೊಳೆದು ಅಡುಗೆ ಮಾಡುತ್ತಿದ್ದಾರೆಎಫ್.ಯು. ಪೂಜೇರಿ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.