ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅಂಗವಿಕಲ ವ್ಯಕ್ತಿಗೆ ಸಾಮಾಜಿಕ ಕಾರ್ಯಕರ್ತ ರಫೀಕ್ ಬಡೇಘರ ನೇತೃತ್ವದಲ್ಲಿ ನಾಗರಿಕರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಕೊಡಿಸಿದ್ದಾರೆ.
ಮಲ್ಲಿಕ ಚಾಂದಷಾ (43) ಎನ್ನುವ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇದನ್ನು ಗಮನಿಸಿದ ನಾಗರಿಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ‘ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಸೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವು ಒದಗಿಸಿದೆವು. ಆದರೆ ಇದಕ್ಕೂ ಮೊದಲು ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಖಂಡನೀಯ’ ಎಂದ ಅವರು ಪೊಲೀಸರಿಗೆ, ವೈದ್ಯರಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ವ್ಯಕ್ತಿಯ ಚಿಕಿತ್ಸೆಗೆ ಮಾಹಿತಿ ತಿಳಿಸಿದವರಿಗೆ ‘ನೀವು ಲೀಡರ್ ಆಗೊಕೆ ಹೋಗಬೇಡಿ. ನಮ್ಗೂ ಗೊತ್ತು ಏನ ಮಾಡಬೇಕು. ನೀವ್ ಸುಮ್ನೆ ಇರಿ’ ಎಂದು ಬೇಜವಬ್ದಾರಿ ಉತ್ತರ ನೀಡಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಅಮಾನವೀಯತೆಯಿಂದ ನಡೆದುಕೊಂಡಿರುವುದು ಖಂಡನೀಯ’ ಎಂದರು.
ಶಿವಾನಂದ ಕುಲಕರ್ಣಿ, ದಾದಾಪೀರ ಸಂಗೊಳ್ಳಿ, ಮೆಹತಾಬ ಖುದ್ದುನ್ನವರ, ತೌಸೀಪ ಅಸುಂಡಿ, ಕುಮಾರ ಹೂಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.