ಬೆಳಗಾವಿ: ಉಡಾನ್-3 ಯೋಜನೆಯಡಿ ಮೊದಲ ವಿಮಾನವು ಇಲ್ಲಿನ ಸಾಂಬ್ರಾದಿಂದ ಬುಧವಾರ ಹಾರಾಟ ಆರಂಭಿಸಿತು.
ಬೆಳಗಾವಿ– ಹೈದರಾಬಾದ್ ನಡುವೆ ವಾರದ ಎಲ್ಲ ದಿನವೂ ಸ್ಪೈಸ್ ಜೆಟ್ ಕಂಪನಿಯ ವಿಮಾನ ಹಾರಾಟ ನಡೆಸಲಿದೆ. ಸಂಜೆ 5.35ಕ್ಕೆ ಬೆಳಗಾವಿಗೆ ಬರುವ ವಿಮಾನ, 5.55ಕ್ಕೆ ಇಲ್ಲಿಂದ ಹೈದರಾಬಾದ್ಗೆ ಹೊರಡಲಿದೆ. ಮೊದಲ ವಿಮಾನವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ, ‘ಇಲ್ಲಿನ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳು, ಸಾರ್ವಜನಿಕರ ಒತ್ತಾಯದಿಂದಾಗಿ ಬೆಳಗಾವಿಯು ಉಡಾನ್–3 ಯೋಜನೆಯಡಿ ಆಯ್ಕೆಯಾಗಿದೆ’ ಎಂದು ತಿಳಿಸಿದರು.
ಸ್ಪೈಸ್ಜೆಟ್ ಸ್ಟೇಷನ್ ಮ್ಯಾನೇಜರ್ ನಿಯಾಜ್ ಶಿರಹಟ್ಟಿ, ಅಧಿಕಾರಿಗಳು ಹಾಗೂ ಪ್ರಯಾಣಿಕರು ಇದ್ದರು.
‘ಉಡಾನ್’ ಯೋಜನೆಯಡಿ ಹುಬ್ಬಳ್ಳಿಗೆ ಆಯ್ಕೆಯಾದಾಗ, ಸ್ಪೈಸ್ ಜೆಟ್ ಕಂಪನಿಯು ಇಲ್ಲಿಂದ ಹಾರಾಟ ನಿಲ್ಲಿಸಿ ಹುಬ್ಬಳ್ಳಿಯಿಂದ ಕಾರ್ಯಾರಂಭಿಸಿತ್ತು. ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈಗೆ ಇಲ್ಲಿನ ವಿಮಾನಗಳು ಇರಲಿಲ್ಲ. ಇದರ ವಿರುದ್ಧ ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಬೆಳಗಾವಿಯಿಂದ ವಿಮಾನಗಳನ್ನು ಹಾರಾಡಿಸಬೇಕು ಎಂದು ಒತ್ತಾಯಿಸಿದ್ದರು. ನಂತರ ಏರ್ಇಂಡಿಯಾ ಕಂಪನಿಯು ಬೆಳಗಾವಿಯಿಂದ ಬೆಂಗಳೂರುಗೆ ವಿಮಾನ ಕಾರ್ಯಾಚರಣೆ ಆರಂಭಿಸಿತು. ಈಗ, ಸ್ಪೈಸ್ಜೆಟ್ ಕಂಪನಿಯು ಬೆಳಗಾವಿ–ಹೈದರಾಬಾದ್ ನಡುವೆ ವಿಮಾನ ಕಾರ್ಯಾಚರಣೆ ಆರಂಭಿಸಿದೆ.
ಸ್ಟಾರ್ ಏರ್ ಕಂಪನಿಯ ವಿಮಾನ ಬೆಳಗಾವಿ–ಬೆಂಗಳೂರು ನಡುವೆ ಕಾರ್ಯಾಚರಣೆ ನಡೆಸುತ್ತಿದೆ.
ಉಡಾನ್–3 ಯೋಜನೆಯಡಿ ಇನ್ನೂ 12 ನಗರಗಳಿಗೆ ಇಲ್ಲಿಂದ ವಿಮಾನಯಾನ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.