ADVERTISEMENT

ಛತ್ರಪತಿ ಪ್ರತಿಮೆ ರಾಜಕೀಯಕ್ಕೆ ಬಳಸಿಕೊಂಡ ಕಾಂಗ್ರೆಸ್‌– ಬಿಜೆಪಿ: ಎಂಇಎಸ್‌ ಆರೋಪ

ಶಿವಾಜಿ ಪ್ರತಿಮೆ ಶುದ್ಧೀಕರಣಕ್ಕೆ ಮುಂದಾದ ಎಂಇಎಸ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 14:42 IST
Last Updated 8 ಮಾರ್ಚ್ 2023, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಈಚೆಗಷ್ಟೇ ಲೋಕಾರ್ಪಣೆ ಮಾಡಿದ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಅಪಚಾರ ಮಾಡಿದ್ದಾರೆ. ಆದ್ದರಿಂದ ಮಾರ್ಚ್‌ 19ರಂದು ಇಡೀ ದಿನ ಪ್ರತಿಮೆ ಶುದ್ಧೀಕರಣ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ತಿಳಿಸಿದೆ.

ಇಲ್ಲಿನ ಮರಾಠಾ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಎಂಇಎಸ್‌ ನಾಯಕರು ಒಮ್ಮತದಿಂದ ಈ ನಿರ್ಣಯ ಕೈಗೊಂಡರು.

‘ಛತ್ರಪತಿ ಅವರ ಪ್ರತಿಮೆ ಹಾಗೂ ಕೀರ್ತಿಯುನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ರಾಜಕೀಯಕ್ಕೆ ಬಳಸಿದ್ದಾರೆ. ಇದು ಅಕ್ಷಮ್ಯ. ಈ ಪ್ರತಿಮೆ ಅಶುದ್ಧಗೊಳಿಸುವುದು ಅಗತ್ಯ. ಅದರ ಅಂಗವಾಗಿ ಶಿವಾಜಿ ಮಹಾರಾಜರ ಪಾದಪೂಜೆ, ಪಂಚಾಮೃತ ಅಭಿಷೇಕ ಮತ್ತಿತರ ಕಾರ್ಯಕ್ರಮ ನಡೆಯಲಿವೆ. ಅಪಾರ ಸಂಖ್ಯೆಯ ಜನರನ್ನೂ ಸೇರಿಸಲಾಗುವುದು’ ಎಂದು ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಹಾರಾಷ್ಟ್ರದ ಕೊಲ್ಹಾಪುರ, ಸಾತಾರ ಮತ್ತು ಜಿಲ್ಲೆಯ ವಿವಿಧೆಡೆ ಇರುವ ಶಿವಾಜಿ ಮಹಾರಾಜರ ಇತಿಹಾಸ ಸಾರುವ ಕೋಟೆಗಳಿಂದ ಶಿವಜ್ಯೋತಿ ತಂದು, ನಗರದಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ರಾಜಹಂಸಗಡಕ್ಕೆ ತೆಗೆದುಕೊಂಡು ಹೋಗಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ದೀಪಕ ದಳವಿ, ಮನೋಹರ ಕಿಣೇಕರ್, ಎಂ.ಜಿ.ಪಾಟೀಲ, ಪ್ರಕಾಶ ಮರಗಾಲೆ, ವಿಕಾಸ ಕಲಘಟಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.