ಪ್ರಜಾವಾಣಿ ವಾರ್ತೆ
ಮೂಡಲಗಿ: ‘ಕಾಂಗ್ರೆಸ್ನ ಹಗರಣಗಳು, ಮಂತ್ರಿಗಳ ಜಗಳ, ಅರಾಜಕತೆ, ಆರ್ಥಿಕ ಸಂಕಷ್ಟಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕಾಂಗ್ರೆಸ್ ಶಾಸಕರೆ ಸರ್ಕಾರದ ಕಾರ್ಯ ವೈಖರಿಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಜನ ಅಭಿವೃದ್ಧಿ ಪರವಾದ ಸರ್ಕಾರ ಬಯಸುತ್ತಿದ್ದಾರೆ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲ್ಲೂಕಿನ ಹಳ್ಳೂರ ಗ್ರಾಮದ ಹಳ್ಳದರಂಗ ದೇವಸ್ಥಾನ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣದ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಹಳ್ಳೂರ ಗ್ರಾಮಕ್ಕೆ ರಾಜ್ಯಸಭಾ ಸಂಸದರ ನಿಧಿಯಿಂದ ಹಳ್ಳದರಂಗ ಸಮುದಾಯ ಭವನಕ್ಕೆ ₹50 ಲಕ್ಷ , ಚಂದ್ರವ್ವದೇವಿ ಸಮುದಾಯ ಭವನ, ಮಲ್ಲಿಕಾರ್ಜುನ ಸಮುದಾಯ ಭವನ, ಗಾಂಧಿ ನಗರದ ಬಸವೇಶ್ವರ ಸಮುದಾಯ ಭವನ, ಆದಿನಾಥ ಸಮುದಾಯ ಭವನಕ್ಕೆ, ಬಸ್ ಪ್ರಯಾಣಿಕರ ತಂಗುದಾಣಕ್ಕೆ ತಲಾ ₹5 ಲಕ್ಷ ವಿತರಿಸಲಾಗಿದೆ. ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಓಪನ್ ಜಿಮ್ ಸೌಲಭ್ಯ ಒದಗಿಸಲುಪ್ರಯತ್ನಿಸುವೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಚನ್ನಮ್ಮ ವೃತ್ತದ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಪೂಜೆ ನೇರವೇರಿಸಿದರು.ನಂತರ ಚಂದ್ರವ್ವದೇವಿ ದೇವಸ್ಥಾನದ ಹತ್ತಿರ ನಿರ್ಮಾಣಗೊಂಡ ಸಮುದಾಯ ಭವನ ಕಟ್ಟಡ ಉದ್ಘಾಟಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ಸದಸ್ಯರಾದ ಸದಾಶಿವ ಮಾವರಕರ, ಪ್ರಮುಖರಾದ ಬಸವಣೆಪ್ಪ ಡಬ್ಬನ್ನವರ, ಶಂಕರ ಲೋಕನ್ನವರ, ಕುಮಾರ ಲೋಕನ್ನವರ, ಶಿವಪ್ಪ ಕೌಜಲಗಿ, ಶ್ರೀಕಾಂತ ಕೌಜಲಗಿ, ಸುರೇಶ ಮಗದುಮ್ಮ, ತುಕಾರಾಮ ಸನದಿ, ಮುತ್ತೆಪ್ಪ ಬೋಳನ್ನವರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.