ADVERTISEMENT

ಸರ್ಕಾರ ಹಿಂಸೆ, ಅಸಹಿಷ್ಣುತೆಗೆ ಅವಕಾಶ ಕೊಡಬಾರದು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2022, 8:00 IST
Last Updated 7 ಮೇ 2022, 8:00 IST
   

ಬೆಳಗಾವಿ: 'ಯಾವುದೇ ಪಕ್ಷದ ಸರ್ಕಾರವಿರಲಿ ಅದು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ಹಿಂಸೆಗೆ, ದ್ವೇಷಕ್ಕೆ ಅಥವಾ ಅಸಹಿಷ್ಣುತೆಗೆ ಅವಕಾಶ ಮಾಡಿಕೊಡಬಾರದು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ‌‌ ಸಿದ್ದರಾಮಯ್ಯ ಹೇಳಿದ್ದಾರೆ.

ತಾಲ್ಲೂಕಿನ ಹಿರೇಬಾಗೇವಾಡಿ ಸಮೀಪದ ಅರಳೀಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಸ್ವಾಮೀಜಿನಿರಂಜನ ಪಟ್ಟಾಧಿಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

'ಬಸವಾದಿ ಶರಣರ ವಿಚಾರಧಾರೆಗಳು ಸದಾಕಾಲ ಪ್ರಸ್ತುತವಾಗಿವೆ' ಎಂದರು.

ADVERTISEMENT

'ಸಮಾಜದಲ್ಲಿ ಇಂದಿಗೂ ‌ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಅಸಮಾನತೆ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಸಮಾನತೆ ಇದೆ' ಎಂದು‌‌ ವಿಷಾದಿಸಿದರು.

'ಸಮಾಜದಲ್ಲಿನ ಪಿಡುಗುಗಳನ್ನು ಹೋಗಲಾಡಿಸಲು ಬಸವಣ್ಣನವರ ನೇತೃತ್ವದಲ್ಲಿ ಶರಣರು ಪ್ರಯತ್ನ ಮಾಡಿದ್ದೇವೆ. ಸಮಾಜ ಸುಧಾರಕರೆಲ್ಲರೂ ಮನುಷ್ಯರು ಮನುಷ್ಯರಾಗಿ ಬದುಕಬೇಕು ಎಂದು ಸಾರಿದವರು. ಜಾತಿಯ ಸೋಂಕು ಇರಬಾರದು ಮತ್ತು ಮನುಷ್ಯರ ನಡುವೆ ಕಂದಕ ಇರಬಾರದೆಂದು ಬಯಸಿದವರು.‌ ಆ ಆಶಯದಲ್ಲಿ ಸಮ ಸಮಾಜದ ಕನಸು ಕಂಡಿದ್ದರು' ಎಂದು ಸ್ಮರಿಸಿದರು.

'ಯಾವುದೇ ಧರ್ಮವನ್ನು ವೈಭವೀಕರಿಸಬಾರದು.‌ ಅದು ಇರುವುದು ಮನುಷ್ಯನ ಹಿತಕ್ಕಾಗಿ.ಅದಕ್ಕಾಗಿಯೇ, ದಯೆಯೇ ಧರ್ಮದ ಮೂಲವಯ್ಯ ಎಂದು ಶರಣರು ವ್ಯಾಖ್ಯಾನ ನೀಡಿದ್ದಾರೆ. ಮನುಷ್ಯ ಮನುಷ್ಯನನ್ನು ದ್ವೇಷಿಸುವುದು ಧರ್ಮವಲ್ಲ. ಪರಸ್ಪರ ಗೌರವಿಸುವುದೇ ಶ್ರೇಷ್ಠವಾದ ಧರ್ಮ' ಎಂದು ಹೇಳಿದರು.

'ಬುದ್ಧ, ಬಸವಾದಿ ಶರಣರು ಮೊದಲಾದವರು ಹೇಳಿದ್ದನ್ನು ಅಳವಡಿಸಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದಾರೆ. ಜಾತಿ, ಧರ್ಮದ ಮೇಲೆ ವಿಂಗಡಿಸಿ‌ ನೋಡಬಾರದು.‌ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು' ಎಂದರು.

'ಈಗ ಸಮಾಜದಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ಪ್ರೇರಣೆ- ಬೆಂಬಲ ಕೊಡುವುದು ಸಂವಿಧಾನದ ವಿರೋಧಿಯಾಗಿದೆ. ಸಂವಿಧಾನ ಉಳಿದರೆ ಎಲ್ಲರೂ ಉಳಿತಾರೆ. ಇಲ್ಲದಿದ್ದರೆ ಶ್ರೇಣೀಕೃತ ವ್ಯವಸ್ಥೆ ಮತ್ತೆ ಬರಲಿದೆ' ಎಂದು ಆತಂಕ ವ್ಯಕ್ತಪಡಿಸಿದರು.

'ಜಾತಿ, ಅಸಮಾನತೆ ಹೋಗದೆ ನಾಡು- ದೇಶ ಸಮೃದ್ಧಿ ಆಗುವುದಿಲ್ಲ. ಶಾಂತಿ- ನೆಮ್ಮದಿ ನೆಲೆಸುವುದಿಲ್ಲ' ಎಂದರು.

ತೋಂಟದಾರ್ಯ ‌ಮಠದ ತೋಂಟದ ಸಿದ್ದರಾಮ‌ ಸ್ವಾಮೀಜಿ, ಹುಕ್ಕೇರಿ ‌ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಮಹಾಂತೇಶ ಕೌಜಲಗಿ, ವಿಧಾನಪರಿಷತ್ ಸದಸ್ಯ‌ ಚನ್ನರಾಜ ಹಟ್ಟಿಹೊಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.