ADVERTISEMENT

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ; ಸಂಭ್ರಮಿಸಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 14:43 IST
Last Updated 2 ಜುಲೈ 2020, 14:43 IST
ಕಾರ್ಯಕ್ರಮ ಆರಂಭವಾಗುವುದಕ್ಕೆ ಮುಂಚೆ ಕಾಂಗ್ರೆಸ್‌ ಮುಖಂಡ ಮೃಣಾಲ್‌ ಹೆಬ್ಬಾಳಕರ ಮಾತನಾಡಿದರು
ಕಾರ್ಯಕ್ರಮ ಆರಂಭವಾಗುವುದಕ್ಕೆ ಮುಂಚೆ ಕಾಂಗ್ರೆಸ್‌ ಮುಖಂಡ ಮೃಣಾಲ್‌ ಹೆಬ್ಬಾಳಕರ ಮಾತನಾಡಿದರು   

ಬೆಳಗಾವಿ: ಬೆಂಗಳೂರಿನಲ್ಲಿ ಗುರುವಾರ ನಡೆದ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ನೇರಪ್ರಸಾರವನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ಆಯೋಜಿಸಲಾಗಿತ್ತು. ಪಕ್ಷದ ಸಾವಿರಾರು ಜನ ಕಾರ್ಯಕರ್ತರು ವೀಕ್ಷಿಸಿ, ಸಂಭ್ರಮಿಸಿದರು.

ಕ್ಷೇತ್ರದ ಕರಡಿಗುದ್ದಿ, ಮಾರಿಹಾಳ, ಸುಳೇಭಾವಿ, ಮೊದಗಾ, ಬಾಳೇಕುಂದ್ರಿ ಬಿಕೆ, ಬಾಳೇಕುಂದ್ರಿ ಕೆ ಎಚ್, ಮಾವಿನಕಟ್ಟಿ, ಸಾಂಬ್ರಾ, ತಾರಿಹಾಳ, ಚಂದನಹೊಸೂರ, ಶಿಂಧೋಳ್ಳಿ, ಮುತಗಾ, ಹಿರೇಬಾಗೇವಾಡಿ, ಬಡಾಲ ಅಂಕಲಗಿ, ಮುತ್ನಾಳ, ಅರಳಿಕಟ್ಟಿ, ಬೆಂಡಿಗೇರಿ, ಇನಾಂ ಬಡಸ್, ಕುಕಡೊಳ್ಳಿ, ಸಂತಿ ಬಸ್ತವಾಡ, ಮಾರ್ಕಂಡೇಯ ನಗರ, ಹಲಗಾ ಬಸ್ತವಾಡ, ಕೊಂಡಸಕೊಪ್ಪ, ಕೆಕೆ ಕೊಪ್ಪ, ನಂದಿಹಳ್ಳಿ, ರಾಜಹಂಸಗಢ, ಬೆಳವಟ್ಟಿ, ಬಿಜಗರಣಿ, ಬೆಕ್ಕಿನಕೇರಿ, ಅತಿವಾಡ, ಉಚಗಾಂವ, ತುರಮರಿ, ಕುದ್ರೆಮನಿ, ಕಂಗ್ರಾಳಿ ಕೆ.ಎಚ್, ಬೆಳಗುಂದಿ, ಸುಳಗಾ, ಹಂಗರಗಾ, ತುಮ್ಮರಗುದ್ದಿ ಮುಂತಾದ ಸ್ಥಳಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿತ್ತು.

ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರಾಗಿ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ಸಲೀಂ ಅಹ್ಮದ್‌ ಅವರು ಪದಗ್ರಹಣ ಮಾಡುತ್ತಿದ್ದಂತೆ ಜನರು ಸಂಭ್ರಮಿಸಿದರು. ಕಾಂಗ್ರೆಸ್‌ಗೆ ಜಯವಾಗಲಿ, ಡಿ.ಕೆ.ಶಿವಕುಮಾರ್‌ ಅವರಿಗೆ ಜಯವಾಗಲಿ, ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಕೂಗಿದರು.

ADVERTISEMENT

ಪ್ರತಿಜ್ಞಾ ಕಾರ್ಯಕ್ರಮದ ನೇರ ಪ್ರಸಾರಕ್ಕೂ ಮುನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲಾಯಿತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ ಹೆಬ್ಬಾಳಕರ, ಕಾಂಗ್ರೆಸ್ ಮುಖಂಡರಾದ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ವಿವಿಧೆಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.