ADVERTISEMENT

ಸಂವಿಧಾನ ಒಳಿತು ಅನುಷ್ಠಾನದ ಮೇಲೆ ನಿಂತಿದೆ: ಸಾವುಕಾರ ಕಾಂಬಳೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 3:05 IST
Last Updated 27 ನವೆಂಬರ್ 2022, 3:05 IST
ಬೆಳಗಾವಿಯಲ್ಲಿ ಶನಿವಾರ ನಡೆದ ಭಾರತೀಯ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕ ಸಾವುಕಾರ ಕಾಂಬಳೆ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ಭಾರತೀಯ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕ ಸಾವುಕಾರ ಕಾಂಬಳೆ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು   

ಬೆಳಗಾವಿ: ‘ಭಾರತದ ಸಂವಿಧಾನ ವಿಶ್ವಮಾನ್ಯವಾಗಿದೆ. ಅದನ್ನು ಅನುಷ್ಠಾನಕ್ಕೆ ತರುವ ರೀತಿಯಲ್ಲಿ ಸಾಕಷ್ಟು ಸುಧಾರಣೆಗಳು ಆಗಬೇಕಿವೆ’ ಎಂದು ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಮಹಾವಿದ್ಯಾಲಯದ ಉಪನ್ಯಾಸಕ ಸಾವುಕಾರ ಕಾಂಬಳೆ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಸ್‍.ಎಸ್‍.ಎಸ್. ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎನ್‍ಎಸ್‍ಎಸ್ ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ ಭಾರತೀಯ ಸಂವಿಧಾನ ದಿನಾಚರಣೆ ಪ್ರಯುಕ್ತ ‘ಡಾ.ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಒಂದು ಸಂವಿಧಾನ ಒಳ್ಳೆಯದು, ಕೆಟ್ಟದ್ದು ಎಂದು ನಿರ್ಧರಿಸುವುದು ಅದನ್ನು ಅನುಷ್ಠಾನಕ್ಕೆ ತರುವ ಜನರ ಮೇಲೆ ನಿಂತಿರುತ್ತದೆ. ನಮ್ಮ ಸಂವಿಧಾನ ಅಂಶಗಳು ಶ್ರೇಷ್ಠವಾಗಿದ್ದು ಅಷ್ಟೇ ಪ್ರಾಮಾಣಿಕತೆಯಿಂದ ಅನುಷ್ಠಾನ ಮಾಡಿದರೆ ಮಾತ್ರ ಅದು ಒಳ್ಳೆಯದಾಗಿ ಅನುಭವಕ್ಕೆ ಬರುತ್ತದೆ. ಈ ದೃಷ್ಟಿಯಲ್ಲಿ ನಾವು ಸಾಕಷ್ಟು ಸುಧಾರಿಸಬೇಕಿದೆ’ ಎಂದರು.

ADVERTISEMENT

‘ನಾವು ಬರೆದ ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವವರು ಕೆಟ್ಟವರಾಗಿದ್ದರೆ ಸಂವಿಧಾನವೂ ಕೆಟ್ಟದ್ದಾಗುತ್ತದೆ. ಎಷ್ಟೇ ಕೆಟ್ಟ ಸಂವಿಧಾನವಿದ್ದರೂ ಅನುಷ್ಠಾನ ಮಾಡುವವರು ಒಳ್ಳೆಯವರಾಗಿದ್ದರೆ ಸಂವಿಧಾನವೂ ಒಳ್ಳೆಯದಾಗುತ್ತದೆ ಎಂಬುದು ಡಾ.ಅಂಬೇಡ್ಕರ್ ಅವರು ಹೇಳಿದ ಮಾತು’ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ.ನಿರ್ಮಲಾ ಗಡಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಎನ್‍.ಎಸ್‍.ಎಸ್. ಯೋಜನಾಧಿಕಾರಿ ಮಹೇಶ ಪೂಜಾರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು

ಕಾಡೇಶ ಖಾನಾಪುರೆ ಹಾಗೂ ತಂಡದವರು ಕ್ರಾಂತಿಗೀತೆ ಪ್ರಸ್ತುತಪಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.