ಖಾನಾಪುರ (ಬೆಳಗಾವಿ): ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಆಕ್ಷೆಪಾರ್ಯ ಪದ ಬಳಸಿ ನಿಂದಿಸಿದ ಆರೋಪದ ಮೇಲೆ ಬಂಧಿತಾರಾದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರಿಂದ ಹಿರೇಬಾಗೇವಾಡಿ ಪೊಲೀಸರು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಹೇಳಿಕೆ ದಾಖಲಿಸಿಕೊಂಡರು. ಇದರ ವಿಡಿಯೊ ಚಿತ್ರೀಕರಣ ಕೂಡ ಮಾಡಿದರು.
‘ನಾನು ಸಚಿವೆ ವಿರುದ್ಧ ಯಾವುದೇ ರೀತಿಯ ಅಶ್ಲೀಲ ಪದ ಬಳಸಿಲ್ಲ. ಮಹಿಳೆಯರ ಬಗ್ಗೆ ನನಗೆ ಗೌರವವಿದೆ. ಯಾರೋ ಹೇಳಿದ ಹೇಳಿಕೆ ಕೇಳಿ ನನ್ನ ಮೇಲೆ ಸಚಿವೆ ಸುಳ್ಳು ದೂರು ದಾಖಲಿಸಿದ್ದಾರೆ. ದೂರಿಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ’ ಎಂದು ಸಿ.ಟಿ ರವಿ ಹೇಳಿಕೆ ನೀಡಿದರು.
ವಿಚಾರಣೆ ಮುಗಿಸಿದ ಹಿರೇಬಾಗೇವಾಡಿ ಇನ್ಸ್ಪೆಕ್ಟರ್ ಆರ್.ಆರ್. ಪಾಟೀಲ ಅವರು ರವಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಗುರುವಾರ ರಾತ್ರಿಯೇ ವೈದ್ಯಕೀಯ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆತರಲಾಗುವುದು ಎಂದು ಠಾಣೆ ಮೂಲಗಳು ತಿಳಿಸಿವೆ.
ಖಾನಾಪುರ ಪೊಲೀಸ್ ಠಾಣೆಗೆ ಬಂದ ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ, ಬಿ.ಶ್ರೀರಾಮುಲು, ಬಸನಗೌಡ ಯತ್ನಾಳ, ವಿಠ್ಠಲ ಹಲಗೇಕರ ಅವರು ಸಿ.ಟಿ. ರವಿ ಅವರ ಬೆಂಬಲಕ್ಕೆ ನಿಂತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.