ಬೆಳಗಾವಿ: ಸಚಿವ ಸತೀಶ ಜಾರಕಿಹೊಳಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಫಿರೋಜ್ ಸೇಠ್ ಮನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಭೇಟಿ ನೀಡಿದರು.
'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಸಮಾವೇಶಕ್ಕೆ ಆಹ್ವಾನ ನೀಡುವ ನೆಪದಲ್ಲಿ ಫಿರೋಜ್ ಮನೆಗೆ ಹೋಗಿ, 15 ನಿಮಿಷ ಮಾತುಕತೆ ನಡೆಸಿದರು. ಉಪಾಹಾರ ಸೇವಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಫಿರೋಜ್ ಸೇಠ್ ಅವರು, ಸತೀಶ ವಿರುದ್ಧ ಮುನಿಸಿಕೊಂಡಿದ್ದರು. ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದರು.
ಸತೀಶ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡ ಫಿರೋಜ್ ಅವರ ಸಹೋದರ, ಶಾಸಕ ಆಸಿಫ್ ಸೇಠ್, ಸಚಿವ ಎಂ.ಸಿ.ಸುಧಾಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಈ ವೇಳೆ ಹಾಜರಿದ್ದರು.
'ಹಲವು ದಶಕಗಳಿಂದಲೂ ಕಾಂಗ್ರೆಸ್ನೊಂದಿಗೆ ನಮ್ಮ ಕುಟುಂಬ ಗುರುತಿಸಿಕೊಂಡಿದೆ. ಎರಡು ಅವಧಿಗೆ ಶಾಸಕನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಬೆಳವಣಿಗೆಗಾಗಿ ದುಡಿದಿದ್ದೇನೆ. ಸೌಹಾರ್ದ ಭೇಟಿಗಾಗಿ ಶಿವಕುಮಾರ್ ಇಂದು ಮನೆಗೆ ಬಂದಿದ್ದಾರಷ್ಟೇ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ' ಎಂದು ಫಿರೋಜ್ ಸೇಠ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
'ಸತೀಶ ಜಾರಕಿಹೊಳಿ, ನನ್ನ ಮಧ್ಯೆ ಯಾವುದೇ ವೈಮನಸ್ಸು ಇಲ್ಲ' ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.