ADVERTISEMENT

‘ನೋಂದಾಯಿಸದಿದ್ದರೆ, ಕಲಬೆರಕೆ ಮಾಡಿದರೆ ₹ 5 ಲಕ್ಷ ದಂಡ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 15:18 IST
Last Updated 4 ಜನವರಿ 2021, 15:18 IST
ಬೆಳಗಾವಿಯಲ್ಲಿ ಆಹಾರ ಸುರಕ್ಷತೆ ಸಂಬಂಧಿಸಿದ ಪ್ರಚಾರ ಸಾಮಗ್ರಿಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೋಮವಾರ ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಆಹಾರ ಸುರಕ್ಷತೆ ಸಂಬಂಧಿಸಿದ ಪ್ರಚಾರ ಸಾಮಗ್ರಿಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೋಮವಾರ ಬಿಡುಗಡೆ ಮಾಡಿದರು   

ಬೆಳಗಾವಿ: ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಲ್ಲಿ ನೋಂದಣಿ ಇಲ್ಲದೆ ವಹಿವಾಟು ಮಾಡುವವರು, ಜನರಿಗೆ ಸುರಕ್ಷಿತವಲ್ಲದ ಆಹಾರ ಪೂರೈಸಿಸುವವರು ಅಥವಾ ಕಲಬೆರಕೆ ಮಾಡುವವರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ₹ 5 ಲಕ್ಷದವರೆಗೆ ದಂಡ ವಿದಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಎಲ್ಲ ಆಹಾರ ಪದಾರ್ಥ ವಹಿವಾಟು ಮಾಡುವವರು, ಹೋಟೆಲ್ ಮಾಲೀಕರು ಮತ್ತು ಆಹಾರ ತಯಾರಿಸುವವರು, ಹಾಲಿನ ಉತ್ಪಾದಕರು ಹಾಗೂ ಇತರ ಯಾವುದೇ ವರ್ತಕರು ಕಡ್ಡಾಯವಾಗಿ ಎಫ್.ಎಸ್.ಎಸ್.ಎ. ಅಡಿ ನೋಂದಣಿ ಮಾಡಿಸಿ ಪರವಾನಗಿ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ಸುರಕ್ಷಿತ ಆಹಾರ ಪೂರೈಸಬೇಕು. ಅಧಿಕಾರಿಗಳು ಸಹ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

‘ಸುರಕ್ಷಿತವಲ್ಲದಿದ್ದರೆ ಅದು ಆಹಾರವೇ ಅಲ್ಲ. ಆಹಾರವು ಕೇವಲ ಎಲೆಯಲ್ಲ ಊಟ ಬಡಿಸುವುದಲ್ಲ. ಅದು ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಹಿತಕರವಾಗಿರಬೇಕು. ಪರಿಸರಕ್ಕೂ ಹಿತಕರವಾಗಿರಬೇಕು. ಸುರಕ್ಷಿತ ಮತ್ತು ಆರೋಗ್ಯಕರ ಆಹಾರವನ್ನು ಸಾಮಾನ್ಯ ಜನರನ್ನು ತಲುಪಿಸಬೇಕು. ಬಳಕೆದಾರರ ಅಪೇಕ್ಷೆಗೆ ತಕ್ಕಂತೆ ಹಾನಿಕಾರಕವಲ್ಲದ್ದನ್ನು ಪೂರೈಕೆ ಮಾಡಬೇಕು’ ಎಂದು ಎಫ್.ಎಸ್.ಎಸ್.ಎ. ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಜೇಂದ್ರ ಭಾಲ್ಕೆ ತಿಳಿಸಿದರು.

ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ವಿಜಯ ಸಾಲಿಯಾನ ಮತ್ತು ಅಜಯ ಪೈ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.