ADVERTISEMENT

ಬೆಳಗಾವಿ| ಡಿಸಿಸಿ ಬ್ಯಾಂಕ್‌: 9 ಸ್ಥಾನಗಳಿಗೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:37 IST
Last Updated 14 ಅಕ್ಟೋಬರ್ 2025, 2:37 IST
ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಬೆಂಬಲಿಗರು ಸತ್ಕರಿಸಿದರು
ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಬೆಂಬಲಿಗರು ಸತ್ಕರಿಸಿದರು   

ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್‌ನ 16 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಜಾರಕಿಹೊಳಿ ಪೆನಲ್‌ನ ಏಳು ನಿರ್ದೇಶಕರಿದ್ದಾರೆ.

ತಾಲ್ಲೂಕುಮಟ್ಟದ 15 ಕ್ಷೇತ್ರ, ಸಹಕಾರ ಸಂಸ್ಥೆಗಳ ವ್ಯಾಪ್ತಿಗೆ ಬರುವ ಇತರೆ ಕ್ಷೇತ್ರ ಸೇರಿದಂತೆ 16 ಸ್ಥಾನಗಳಿಗೆ ಅ.19ರಂದು ಚುನಾವಣೆ ನಿಗದಿಯಾಗಿತ್ತು.

ಆಯ್ಕೆ ಬಯಸಿ 43 ಅಭ್ಯರ್ಥಿಗಳಿಂದ 72 ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ವಾಪಸ್‌ ಪಡೆಯಲು ಸೋಮವಾರ ಕೊನೇ ದಿನವಾಗಿತ್ತು. ಈಗ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಏಳು ಸ್ಥಾನಗಳಿಗಷ್ಟೇ ಅ.19ರಂದು ಚುನಾವಣೆ ನಡೆಯಲಿದೆ. ಅಂದು ಸಂಜೆಯೇ ಫಲಿತಾಂಶ ಹೊರಬೀಳಲಿದೆ.

ADVERTISEMENT

ಯಾರ್‍ಯಾರು ಆಯ್ಕೆ?

ಯರಗಟ್ಟಿ ಕ್ಷೇತ್ರದಿಂದ ಶಾಸಕ ವಿಶ್ವಾಸ ವೈದ್ಯ, ಕಾಗವಾಡದಿಂದ ಶಾಸಕ ಭರಮಗೌಡ(ರಾಜು) ಕಾಗೆ, ಚಿಕ್ಕೋಡಿಯಿಂದ ಶಾಸಕ ಗಣೇಶ ಹುಕ್ಕೇರಿ, ಇತರೆ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ, ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ,  ಗೋಕಾಕದಿಂದ ಅಮರನಾಥ ಜಾರಕಿಹೊಳಿ, ಸವದತ್ತಿಯಿಂದ ವಿರೂಪಾಕ್ಷಿ ಮಾಮನಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಎಂಬಂತೆ, ರಾಮದುರ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದ  ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ನಾಮಪತ್ರ ವಾಪಸ್‌ ಪಡೆದರು. ಕಾಗವಾಡದಿಂದ ಉಮೇದುವಾರಿಕೆ ಸಲ್ಲಿಸಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ಪುತ್ರ ಶ್ರೀನಿವಾಸ ಕೂಡ ಕಣದಿಂದ ಹಿಂದಕ್ಕೆ ಸರಿದರು.

14 ಜನರು ಕಣದಲ್ಲಿ

ಡಿಸಿಸಿ ಬ್ಯಾಂಕ್‌ನ ಏಳು ನಿರ್ದೇಶಕ ಸ್ಥಾನಕ್ಕೆ ತುರುಸಿನ ಚುನಾವಣೆ ನಡೆಯಲಿದ್ದು, 14 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 

ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಬೈಲಹೊಂಗಲದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಡಾ.ವಿಶ್ವನಾಥ ಪಾಟೀಲ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ರಾಮದುರ್ಗದಲ್ಲಿ ಶ್ರೀಕಾಂತ ಢವಣ ವಿರುದ್ಧ ಮಲ್ಲಪ್ಪ ಯಾದವಾಡ, ಚನ್ನಮ್ಮನ ಕಿತ್ತೂರಿನಲ್ಲಿ ವಿಕ್ರಮ ಇನಾಮದಾರ ವಿರುದ್ಧ ನಾನಾಸಾಹೇಬ ಪಾಟೀಲ, ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ  ರಾಜೇಂದ್ರ ಪಾಟೀಲ, ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಉತ್ತಮ ಪಾಟೀಲ ಮತ್ತು ರಾಯಬಾಗದಲ್ಲಿ ಅಪ್ಪಾಸಾಹೇಬ ಕುಲಗೂಡೆ ವಿರುದ್ಧ ಬಸಗೌಡ ಆಸಂಗಿ ಸ್ಪರ್ಧಿಸಿದ್ದಾರೆ.

‘ನಮ್ಮ ಪೆನಲ್‌ನ ಏಳು ಮಂದಿ ಅವಿರೋಧ ಆಯ್ಕೆ’: ಶಾಸಕ ಬಾಲಚಂದ್ರ ಜಾರಕಿಹೊಳಿ

‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪೆನಲ್‌ನ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಅವಿರೋಧ ಆಯ್ಕೆಯಾದ ಇತರೆ ಇಬ್ಬರು ಸದಸ್ಯರೂ ನಮ್ಮ ಪೆನಲ್‌ನ ಭಾಗವಾಗಿದ್ದಾರೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು 13 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದೆವು. ಚಿಕ್ಕೋಡಿ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿರಲಿಲ್ಲ. ಕಣದಲ್ಲಿದ್ದ ಬೇರೆ ಅಭ್ಯರ್ಥಿಗಳೊಂದಿಗೆ ಚರ್ಚಿಸಿ ಬ್ಯಾಂಕಿನ ಹಿತಾಸಕ್ತಿಗಾಗಿ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಕೋರಿದೆವು. ಇದಕ್ಕೆ ಕೆಲವರು ಒಪ್ಪಿಕೊಂಡರು. ಕೆಲವರು ಒಪ್ಪಿಗೆ ಸೂಚಿಸಲಿಲ್ಲ’ ಎಂದು ತಿಳಿಸಿದರು.

‘ನಮ್ಮ ಪೆನಲ್‌ನಿಂದ ಶಾಸಕ ವಿಶ್ವಾಸ ವೈದ್ಯ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ರಾಹುಲ್ ಜಾರಕಿಹೊಳಿ ಅಮರನಾಥ ಜಾರಕಿಹೊಳಿ ವಿರೂಪಾಕ್ಷಿ ಮಾಮನಿ ಅರವಿಂದ ಪಾಟೀಲ ನೀಲಕಂಠ ಕಪ್ಪಲಗುದ್ದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದರು. ‘ಚಿಕ್ಕೋಡಿ ಕ್ಷೇತ್ರದಿಂದ ಶಾಸಕ ಗಣೇಶ ಹುಕ್ಕೇರಿ ನಾಮಪತ್ರ ಸಲ್ಲಿಸಿದರು. ಸಚಿವ ಸತೀಶ ಜಾರಕಿಹೊಳಿ ಮತ್ತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಹುಕ್ಕೇರಿ ಉಮೇದುವಾರಿಕೆ ಬೆಂಬಲಿಸಿದರು. ಹಾಗಾಗಿ ನಾವೂ ಹುಕ್ಕೇರಿ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಹೇಳಿದರು.

‘ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂದರ್ಭ ವಿವಿಧ ಸಮುದಾಯಗಳ ನಾಯಕರೊಂದಿಗೆ ಸಭೆ ನಡೆಸಿದವು. ಆಗ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಕುರುಬ ಸಮುದಾಯಕ್ಕೆ ಹಿಂದಿನಂತೆ ಪ್ರಾತಿನಿಧ್ಯ ನೀಡಲಾಗಿಲ್ಲ ಎಂಬ ಮಾತು ಕೇಳಿಬಂತು. ಹಾಗಾಗಿ ಕುರುಬ ಸಮುದಾಯದಲ್ಲಿ ಒಬ್ಬರನ್ನು ಸರ್ಕಾರವು ನಿಗಮ–ಮಂಡಳಿಗೆ ನಾಮನಿರ್ದೇಶನ ಮಾಡಲಿದೆ ಎಂದು ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಜೂನ್‌ನಲ್ಲಿ ನಾವು ಚುನಾವಣೆ ಪ್ರಚಾರ ಆರಂಭಿಸಿದೆವು. ಜಿಲ್ಲೆಯ ಜನರು ಮತ್ತು ಸಹಕಾರಿ ಸಂಸ್ಥೆಗಳು ಜಾರಕಿಹೊಳಿ ಕುಟುಂಬಕ್ಕೆ ಬೆಂಬಲವಾಗಿ ನಿಂತವು. ಸಹಕಾರಿ ಕ್ಷೇತ್ರದ ಹಿತದೃಷ್ಟಿಯಿಂದ ನಾವು ಎಲ್ಲರನ್ನೂ ಒಗ್ಗೂಡಿಸಿದ್ದೇವೆ’ ಎಂದರು.‘ನಮ್ಮ ಪೆನಲ್‌ನ ಯಾವುದೇ ನಿರ್ದೇಶಕರು ಪಕ್ಷಾಂತರ ಮಾಡುವುದಿಲ್ಲ. ನಮ್ಮ ಕುಟುಂಬದ ವಿರುದ್ಧ ಕೆಲವರಿಂದ ಅಪಪ್ರಚಾರ ನಡೆದಿತ್ತು. ಆದರೆ ಅವರ ಪ್ರಯತ್ನ ಕೈಹಿಡಿದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.