ADVERTISEMENT

DCCಬ್ಯಾಂಕ್ ಚುನಾವಣೆ|ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ:ರಮೇಶ ಕತ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 11:21 IST
Last Updated 7 ಅಕ್ಟೋಬರ್ 2025, 11:21 IST
   

ಬೆಳಗಾವಿ: ‘ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಾನು ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಬೇರೆ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸುತ್ತಾರೆ. ಇಲ್ಲಿ ನಮ್ಮ ಪೆನಲ್‌ ರಚಿಸುವ ಪ್ರಶ್ನೆಯೇ ಎದುರಾಗದು’ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಹುಕ್ಕೇರಿ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ, ಇಲ್ಲಿನ ಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

‘ನಾನು ಹುಕ್ಕೇರಿ ಕ್ಷೇತ್ರದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದೇನೆ. ಹಲವರು ತಮ್ಮ ಕ್ಷೇತ್ರಗಳಿಗೂ ಬಂದು ಪ್ರಚಾರ ಮಾಡುವಂತೆ ಕೋರಿದ್ದಾರೆ. ಅವರು ಆಹ್ವಾನಿಸಿದರೆ ಹೋಗುತ್ತೇನೆ’ ಎಂದರು.

ADVERTISEMENT

‘ಈ ಬಾರಿ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅವಿರೋಧವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ’ ಎಂಬ ಶಾಸಕ ಬಾಲಚಂದ್ರ ಜಾರಕಿಹೊಳಿ‌ ಹೇಳಿಕೆಗೆ, ‘ಜಿಲ್ಲೆಯ ಜನರು ಹಿತ ಚಿಂತಕರಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಬಾಲಚಂದ್ರ ಜಾರಕಿಹೊಳಿ‌ ಅಥವಾ ನಾನು ಹೇಳಿಕೆ ನೀಡುವುದು ಸೂಕ್ತ ಎನಿಸದು’ ಎಂದು ಹೇಳಿದರು.

‘ನಾನು ಈ ಚುನಾವಣೆ ನಾಯಕತ್ವ ವಹಿಸಿಕೊಳ್ಳುವುದಿಲ್ಲ. ಸಾರ್ವತ್ರಿಕ ಚುನಾವಣೆಗೆ ನಾಯಕತ್ವ ಬೇಕು. ಸಹಕಾರಿ ರಂಗಕ್ಕೆ ಅದರ ಅಗತ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘16 ನಿರ್ದೇಶಕ ಸ್ಥಾನಗಳ 10 ಸ್ಥಾನ ತಮ್ಮ ಬಳಿಯೇ ಇವೆ’ ಎಂಬ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ, ‘ನಾನು ಇದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ’ ಎಂದರು.

‘1996ರಲ್ಲಿ ಡಿಸಿಸಿ ಬ್ಯಾಂಕ್‌ ಆರ್ಥಿಕವಾಗಿ ದಿವಾಳಿಯಾಗಿತ್ತು. ಯಾರೂ ಇದರ ಅಧ್ಯಕ್ಷರಾಗಲು ಸಿದ್ಧವಿರಲಿಲ್ಲ. ಆಗ ನಾನು ಅಧ್ಯಕ್ಷನಾಗಿ, ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಶ್ರಮಿಸಿ ಇಡೀ ಬ್ಯಾಂಕ್‌ ಹಳಿಗೆ ತಂದೆ. ಠೇವಣಿದಾರರಿಗೆ ಹಣ ಹಿಂತಿರುಗಿಸಿದೆ. ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಈಗ ಒಂಭತ್ತನೇ ಬಾರಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಜನರ ಸೇವೆ ಮಾಡುವುದೇ ನನ್ನ ಗುರಿ’ ಎಂದರು.

‘ಜಿಲ್ಲೆಯಲ್ಲಿ ಯಾರ ಕೈಗೆ ಡಿಸಿಸಿ ಬ್ಯಾಂಕ್‌ ಅಧಿಕಾರ ನೀಡಿದರೆ ಉತ್ತಮ ಎಂಬುದು ಜನರಿಗೆ ಗೊತ್ತಿದೆ. ಇಡೀ ಜಿಲ್ಲೆಯ ಜನರ ಹಣ ಬ್ಯಾಂಕ್‌ನಲ್ಲಿದೆ. ಸ್ವಲ್ಪ ವ್ಯತ್ಯಾಸವಾದರೂ 50 ಲಕ್ಷ ಜನರ ಬದುಕು ಬೀದಿಗೆ ಬರುತ್ತದೆ. ಹಾಗಾಗಿ ಬ್ಯಾಂಕಿನ ಅಧಿಕಾರ ಯಾರ ಕೈಗೆ ಕೊಟ್ಟರೆ ಉತ್ತಮ ಎಂದು ಜನರೇ ನಿರ್ಧರಿಸುತ್ತಾರೆ’ ಎಂದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ನನ್ನ ವಿರೋಧಿ ಬಣ ಯಾವುದೂ ಇಲ್ಲ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ. ನಮಗೆ ಮ್ಯಾಜಿಕ್‌ ನಂಬರ್‌(9) ಅವಶ್ಯಕತೆಯೂ ಇಲ್ಲ. ಸಮಾನ ಮನಸ್ಕರೆಲ್ಲ ನನ್ನೊಂದಿಗೆ ಬರುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘40 ವರ್ಷ ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇಡೀ ಆಡಳಿತ ಮಂಡಳಿಗೆ ಸಹಕಾರ ಕೊಟ್ಟಿದೆ. ಈ ಹಿಂದೆ ಬ್ಯಾಂಕಿನ ಅಧ್ಯಕ್ಷನಾಗಲು ಜಾರಕಿಹೊಳಿ ಸಹೋದರರ ಪಾತ್ರವಿದ್ದದ್ದು ನಿಜ’ ಎಂದರು.

‘ಹುಕ್ಕೇರಿಯ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘದ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಕೆಲವರು ಹೇಳಿದ್ದರು. ಆದರೆ, ನಮ್ಮ ಪೆನಲ್‌ ಗೆದ್ದಿತು. ಅವರಂತೆ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹವಾ ಮಾಡಿಕೊಂಡು ಹೋಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ನೀವು, ಲಕ್ಷ್ಮಣ ಸವದಿ ಈ ಚುನಾವಣೆಯಲ್ಲಿ ಒಂದಾಗುತ್ತೀರಾ’ ಎಂಬ ಪ್ರಶ್ನೆಗೆ, ‘ನಾವು ಒಂದಾಗಿಯೇ ಇದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.