ADVERTISEMENT

ಬೆಳಗಾವಿ | ಮಹಾರಾಷ್ಟ್ರದ ಜೊತೆ ನೀರು ವಿನಿಮಯ ಒಪ್ಪಂದ ಮಾಡಿಕೊಳ್ಳಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮೇ 2020, 15:06 IST
Last Updated 2 ಮೇ 2020, 15:06 IST
ಡ್ಯಾಮ್‌ನಿಂದ ನದಿಗೆ ನೀರು ಹರಿಯುತ್ತಿರುವುದು– ಸಾಂಕೇತಿಕ ಚಿತ್ರ
ಡ್ಯಾಮ್‌ನಿಂದ ನದಿಗೆ ನೀರು ಹರಿಯುತ್ತಿರುವುದು– ಸಾಂಕೇತಿಕ ಚಿತ್ರ   

ಬೆಳಗಾವಿ: ಬೇಸಿಗೆ ಕಾಲದಲ್ಲಿ ಮಹಾರಾಷ್ಟ್ರದ ಕೊಯ್ನಾ, ವಾರಣಾ ಜಲಾಶಯಗಳಿಂದ ರಾಜ್ಯಕ್ಕೆ ನೀರು ಬಿಡುಗಡೆ ಮಾಡುವ ಕುರಿತು ಉಭಯ ರಾಜ್ಯಗಳ ನಡುವೆ ಶಾಶ್ವತವಾದ ‘ನೀರು ವಿನಿಮಯ ಒಪ್ಪಂದ’ ಮಾಡಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಶನಿವಾರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಆಗ್ರಹಿಸಿತು.

ಬೆಳಗಾವಿ ಸಮೀಪದ ಕಿಣಯೆ ಜಲಾಶಯಕ್ಕೆ ಭೇಟಿ ನೀಡಿದ್ದ ಸಚಿವರಿಗೆ ಮನವಿ ಸಲ್ಲಿಸಿದ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ‘ಕಳೆದ ವರ್ಷ ರಾಜ್ಯಕ್ಕೆ ನೀರು ಬಿಡುಗಡೆ ಮಾಡದೇ ಮಹಾರಾಷ್ಟ್ರ ಮೊಂಡುತನ ಪ್ರದರ್ಶಿಸಿತ್ತು. ಇದಲ್ಲದೇ, ಪ್ರವಾಹ ಸಮಯದಲ್ಲಿ ಭಾರೀ ಪ್ರಮಾಣದ ನೀರನ್ನು ಬಿಡುವ ಮಾಡುವ ಮೂಲಕ ಅಪಾರ ಪ್ರಮಾಣದ ಬೆಳೆ, ಆಸ್ತಿ ಪಾಸ್ತಿ ಹಾನಿಯಾಗಲು ಕಾರಣವಾಯಿತು’ ಎಂದು ದೂರಿದರು.

‘ಪ್ರವಾಹ ಮೇಲ್ವಿಚಾರಣೆ ಸಮಿತಿ’ ರಚಿಸುವ ನಿರ್ಧಾರ ಕಳೆದ ವರ್ಷವೇ ಆಗಿದ್ದರೂ ಇನ್ನೂವರೆಗೂ ರಚನೆಯಾಗಿಲ್ಲ. ಈ ಸಮಿತಿಯನ್ನು ರಚಿಸುವುದು ಅತ್ಯವಶ್ಯಕವಾಗಿದೆ. ಮಹಾರಾಷ್ಟ್ರದ ಅಧಿಕಾರಿಗಳ ತಂಡವು ಈ ವರ್ಷಾರಂಭದಲ್ಲಿ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಂತೆ ನಮ್ಮ ರಾಜ್ಯದ ಅಧಿಕಾರಿಗಳ ತಂಡವೊಂದನ್ನು ಮಹಾರಾಷ್ಟ್ರದ ಜಲಾಶಯಗಳ ಪರಿಶೀಲನೆಗೆ ಕಳಿಸಿಕೊಡಬೇಕು’ ಎಂದು ಸಚಿವರನ್ನು ಆಗ್ರಹಿಸಿದರು.

ADVERTISEMENT

ನಿಯೋಗದಲ್ಲಿ ಹರೀಶ ಕರಿಗೊಣ್ಣವರ, ವೀರೇಂದ್ರ ಗೋಬರಿ, ಆನಂದ ಹುಲಮನಿ, ಸತೀಶ ಪಾಟೀಲ, ಸಂದೀಪ ಹೊಸಳ್ಳಿ, ಅಭಿನವ ಉಪಾಧ್ಯೆ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.