ಬೆಳಗಾವಿ: ‘ದೇಶದಲ್ಲಿ ಕಾಂಗ್ರೆಸ್ ಪಕ್ಷ ಅವಸಾನದ ಅಂಚಿನಲ್ಲಿದೆ. ಉತ್ತರಪ್ರದೇಶದಲ್ಲಿ ಈ ಪಕ್ಷಕ್ಕೆ ವಿಳಾಸ ಕೂಡ ಇಲ್ಲ’ ಎಂದು ಬಿಜೆಪಿ ಮುಖಂಡ, ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಸ್ಪರ್ಧೆಯಿಂದ ಹೆದರಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವೈಯನಾಡಿಗೆ ಪಲಾಯನ ಮಾಡಿದ್ದಾರೆ. ಹಿಂದೂಗಳು ಕಾಂಗ್ರೆಸ್ಗೆ ಮತ ಹಾಕುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದು ಮುಸ್ಲಿಂ, ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಕ್ಕೆ ಹೋಗಿದ್ದಾರೆ’ ಎಂದು ಟೀಕಿಸಿದರು.
‘ರಾಹುಲ್ಗೆ ಎರಡು ಕಡೆಗಳಲ್ಲೂ ಸೋಲು ಖಚಿತ’ ಎಂದು ಭವಿಷ್ಯ ನುಡಿದರು.
‘ರಾಜ್ಯದಲ್ಲೂ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಜಗಳ ಬೀದಿಗೆ ಬಂದಿದೆ. ಜೆಡಿಎಸ್ ಈಗ ತಂದೆ-ಮಕ್ಕಳ ಪಕ್ಷವಷ್ಟೇ ಆಗಿಲ್ಲ. ತಂದೆ-ಮಗ-ಮೊಮ್ಮಕ್ಕಳು-ಸೊಸೆಯಂದಿರ ಪಕ್ಷವಾಗಿದೆ’ ಎಂದು ಲೇವಡಿ ಮಾಡಿದರು.
‘ಜೆಡಿಎಸ್ ಮೇಲೆ ಕಾರ್ಯಕರ್ತರಿಗೆ ನಂಬಿಕೆ ಉಳಿದಿಲ್ಲ. ಹೀಗಾಗಿ ತುಮಕೂರಿನಲ್ಲಿ ಜೆಎಡಿಎಸ್ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಸೋಲುವುದು ಖಚಿತ. ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ಸಾಧ್ಯವಿಲ್ಲ’ ಎಂದರು.
‘ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಹಾಸನದಲ್ಲಿ ಬಿಜೆಪಿಯ ಎ. ಮಂಜು ಜಯ ಗಳಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.