ಅಥಣಿ: ಸ್ವಾತಂತ್ರ್ಯ ಸಿಕ್ಕು ಹಲವು ವರ್ಷಗಳೇ ಕಳೆದರೂ ರೈತರು ಇನ್ನೂ ಬಡತನದಲ್ಲಿ ಇದ್ದಾರೆ. ಇದಕ್ಕೆ ನೀರಾವರಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಕಾರಣ ಎಂದು ಭರಮಗೌಡ (ರಾಜು) ಕಾಗೆ ಹೇಳಿದರು.
ಕಾಗವಾಡ ಮತಕ್ಷೇತ್ರದ ಗುಂಡೆವಾಡಿ ಗ್ರಾಮದಲ್ಲಿ 11 ಕೆರೆ ತುಂಬುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ರೈತರು ಸುಖವಾಗಿದ್ದರೆ ನಾವೆಲ್ಲ ಸುಖವಾಗಿರುತ್ತೇವೆ. ಈ ಯೋಜನೆ ಸಂಪೂರ್ಣವಾಗುವವರೆಗೂ ಏನೇ ಅಡಚಣೆ ಬಂದರೂ ನಾವು ನಿಮ್ಮೊಂದಿಗೆ ಇರುತ್ತೇವೆ. ಈ ಯೋಜನೆಯನ್ನು ಆದಷ್ಟು ಬೇಗ ಮುಗಿಸಿ ರೈತರ ಜೀವನ ಹಸನಾಗಿಸುವುದೇ ಮೂಲ ಉದ್ದೇಶವಾಗಿದೆ. ಆದಷ್ಟು ತ್ವರಿತವಾಗಿ ಬಸವೇಶ್ವರ ಏತ ನೀರಾವರಿ ಮುಗಿಸಬೇಕು ಎಂದು ಒತ್ತಾಯ ಮಾಡಿದ್ದೇವೆ’ ಎಂದು ಹೇಳಿದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ಕೆರೆ ತುಂಬುವ ಯೋಜನೆಯಿಂದ ಅಂರ್ತಜಲಕ್ಕೆ ತುಂಬಾ ಅನುಕೂಲವಾಗುತ್ತದೆ. ಅಥಣಿ ಕ್ಷೇತ್ರದಲ್ಲಿ 9 ಕೆರೆ ತುಂಬುವ ಯೋಜನೆಯ ಮೊದಲ ಹಂತ 45 ದಿನಗಳಲ್ಲಿ ಪೂರ್ತಿಯಾಗುತ್ತದೆ. ಅಮ್ಮಜೇಶ್ವರಿ ಏತ ನೀರಾವರಿ ಈಗಾಗಲೇ ಪೈಪಲೈನ್ ಕಾಮಗಾರಿ ಪೂರ್ಣಗೊಳ್ಳಲು ಬಂದಿದೆ. ಅಮ್ಮಾಜೇಶ್ವರಿ ಹಾಗೂ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ತಿಯಾದರೆ ಕಾಗವಾಡ ಹಾಗೂ ಅಥಣಿ ಸಂಪೂರ್ಣ ಹಸಿರುಮಯವಾಗುತ್ತದೆ ಎನ್ನುವ ಹೆಮ್ಮೆ ನಮಗಿದೆ’ ಎಂದರು.
ಕೃಷ್ಣಾ ಸಕ್ಕರೆ ಕಾರ್ಖಾನೆ ಅದ್ಯಕ್ಷ ಪರಪ್ಪಾ ಸವದಿ, ಮುಖಂಡರಾದ ಚಂದ್ರಕಾಂತ ಇಮ್ಮಡಿ, ವಿನಾಯಕ ಬಾಗಡಿ, ಚೂನಪ್ಪಾ ಪೂಜಾರಿ, ಶಂಕರ ವಾಘಮೋಡೆ, ಗೂಳಪ್ಪಾ ಜತ್ತಿ, ಶಿವಾನಂದ ಗುಡ್ಡಾಪುರ, ಶಿವಾನಂದ ಗೊಲಭಾಂವಿ, ಬಸವಾರಜ ಅಂಗಡಿ, ಗುತ್ತಿಗೆದಾರ ಅಶೋಕ ಕಪ್ಪಲಗುದ್ದಿ, ನೀರಾವರಿ ಅಧಿಕಾರ ಪ್ರವೀಣ ಹುಣಸಿಕಟ್ಟಿ, ಪ್ರದೀಪ ಪಾಟೀಲ, ಸಂಗಮೇಶ ಹಚ್ಚಡದ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.