ADVERTISEMENT

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳು, ಗೊಂದಲದ ವಾತಾವರಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 7:45 IST
Last Updated 20 ಆಗಸ್ಟ್ 2022, 7:45 IST
ಸಂಗೊಳ್ಳಿ ರಾಯಣ್ಣ ಚಿತ್ರವಿದ್ದ ಫ್ಲೆಕ್ಸ್‌ಗಳನ್ನು ಹರಿದು ಹಾಕಿರುವ ದೃಶ್ಯ
ಸಂಗೊಳ್ಳಿ ರಾಯಣ್ಣ ಚಿತ್ರವಿದ್ದ ಫ್ಲೆಕ್ಸ್‌ಗಳನ್ನು ಹರಿದು ಹಾಕಿರುವ ದೃಶ್ಯ   

ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಖನಗಾಂವದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಫ್ಲೆಕ್ಸ್‌ ಹರಿದಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಶನಿವಾರ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಘಟನೆ ಖಂಡಿಸಿ ರಾಯಣ್ಣ ಅಭಿಮಾನಿಗಳು ಪ್ರತಿಭಟಿಸಿದರು. ಮೆರವಣಿಗೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಖನಗಾಂವದ ರಾಯಣ್ಣ ವೃತ್ತದಲ್ಲಿ ಈ ಫ್ಲೆಕ್ಸ್‌ ಅಳವಡಿಸಲಾಗಿತ್ತು. ಕಿಡಿಗೇಡಿಗಳು ಇದನ್ನು ಹರಿದುಹಾಕಿ ಆತಂಕಕ್ಕೆ ಕಾರಣವಾದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ‍‍ಪ್ರತಿಕ್ರಿಯಿಸಿದ ಗೋಕಾಕ ಗ್ರಾಮೀಣ ಪಿಎಸ್‌ಐ ಎನ್‌.ಆರ್‌.ಖಿಲಾರಿ, ‘ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಫ್ಲೆಕ್ಸ್‌ ಹರಿದುಹಾಕಿದ್ದಾನೆ ಎಂಬ ಸಂಶಯವಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದೆ ಶಾಂತಿ ಕಾಪಾಡಲು ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.