ಮೂಡಲಗಿ: ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರು ನಾಯಿ ಎನ್ನುತ್ತಾರೆ. ಈ ಮಾತನ್ನು ನಿಜ ಮಾಡುವಂತೆ ಶ್ವಾನವೊಂದು ತಾಲ್ಲೂಕಿನ ಅವರಾದಿಯಲ್ಲಿ ನಡವಳಿಕೆ ತೋರುತ್ತಿದೆ.
ಅವರಾದಿಯ ಶಂಕರೆಪ್ಪ ಈರಪ್ಪ ಮಡಿವಾಳರ ಮೂರು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾದರು. ಅವರು ಸಾಕಿದ ನಾಯಿ ಯಜಮಾನನ ಸಾವಿನ ದುಃಖದಲ್ಲಿ ಮೂರು ದಿನಗಳಿಂದ ಅನ್ನ–ನೀರು ಬಿಟ್ಟು ಮಾಲೀಕನ ಕನವರಿಕೆಯಲ್ಲಿದೆ. ತಿನ್ನಲು ಏನೇ ಇಟ್ಟರೂ ಅದನ್ನು ಮುಟ್ಟದೆ ಕಣ್ಣೀರಿಡುತ್ತಾ ಕುಟುಂಬದವರೊಂದಿಗೆ ದುಃಖ ಹಂಚಿಕೊಳ್ಳುತ್ತಿದೆ.
ನಿತ್ಯವೂ ತನ್ನ ಯಜಮಾನನ ಸಮಾಧಿ ಸ್ಥಳಕ್ಕೆ ಹೋಗಿಬರುವುದು ಮಾಡುತ್ತಿದೆ. ಮನೆಯಲ್ಲಿ ತನ್ನ ಯಜಮಾನ ಕುಳಿತುಕೊಳ್ಳುತ್ತಿದ್ದ ಸ್ಥಳ, ಮಲಗುತ್ತಿದ್ದ ಹಾಸಿಗೆ ಬಳಿಯಲ್ಲಿ ಕನವರಿಸುತ್ತಿವ ದೃಶ್ಯ ಮನ ಕಲಕುತ್ತದೆ. ತನ್ನ ಪಾಲಕ ಬರುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಶ್ವಾನ ವರ್ತನೆ ತೋರುತ್ತಿದೆ.
‘ತಮ್ಮ ಮಕ್ಕಳಂತೆ ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದರು. ಅವುಗಳಿಗೆ ತಿನ್ನಲಿಕ್ಕೆ ಉಣ್ಣಲಿಕ್ಕೆ ಎಂದೂ ಕಡಿಮೆ ಮಾಡುತ್ತಿದ್ದಿಲ್ಲರೀ’ ಎಂದು ಶಂಕರೆಪ್ಪ ಅವರ ಪತ್ನಿ ಸುರೇಖಾ ಕಣ್ಣೀರಾದರು.
ಹಾಲು ಸಂಗ್ರಹಿಸಿ ಮಾರುವ ಕಾಯಕ ಮಾಡುತ್ತಿದ್ದ ಶಂಕರೆಪ್ಪ ಅವರು ಪ್ರಾಣಿ– ಪಕ್ಷಿ ಪ್ರೇಮಿಯಾಗಿದ್ದರು. ಮನೆಯಲ್ಲಿ 4 ನಾಯಿಗಳು, ಬೆಕ್ಕು, ಕೋತಿ ಸಾಕಿದ್ದರು. ಹಾಲು ಸಂಗ್ರಹಿಸುವ ವಾಹನದಲ್ಲಿ ತಮ್ಮೊಂದಿಗೆ ಅವುಗಳನ್ನು ಅಲ್ಲಲ್ಲಿ ಕರೆದೊಯುತ್ತಿದ್ದರು. ಶಂಕರೆಪ್ಪ ಸಾಕಿದ್ದ ಕೋತಿ ಸಹ ಆಹಾರ ಮುಟ್ಟುತ್ತಿಲ್ಲ. ಮೂಕ ಪ್ರಾಣಿಗಳ ಈ ಪ್ರೀತಿ ಗ್ರಾಮಸ್ಥರ ಗಮನಸೆಳೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.