ಅಥಣಿ: ‘ಮನೆಯೊಂದಿಗೆ ಸುತ್ತಮುತ್ತಲಿನ ಪರಿಸರದಲ್ಲೂ ಸ್ವಚ್ಛತೆ ಕಾಪಾಡಿಕೊಂಡರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಕನಸು ಆದಷ್ಟು ಬೇಗ ನನಸಾಗುತ್ತದೆ’ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ತಾಲ್ಲೂಕಿನ ಸಂಕೊನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಯೋಗಿ ನಗರದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ₹ 20 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಘಟಕಕ್ಕೆ ಚಾಲನೆ ನೀಡಿ, 1,500 ಕುಟುಂಬಗಳಿಗೆ ಹಸಿರು ಮತ್ತು ಕೆಂಪು ಬಕೆಟ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹಸಿ ಹಾಗೂ ಒಣಕಸವನ್ನು ಮೂಲದಲ್ಲೇ ಬೇರ್ಪಡಿಸಿ ಕೊಡಬೇಕು ಎಂಬ ಉದ್ದೇಶದಿಂದ ಬಕೆಟ್ಗಳನ್ನು ಪ್ರತಿ ಮನೆಗಳಿಗೂ ನೀಡಲಾಗುತ್ತಿದೆ. ಇದನ್ನು ಎಲ್ಲರೂ ಪಾಲಿಸಿದರೆ, ಸ್ಥಳೀಯ ಸಂಸ್ಥೆಯವರು ಕಸದಿಂದ ರಸ ಮಾಡಲು ಅನಕೂಲವಾಗುತ್ತದೆ’ ಎಂದು ತಿಳಿಸಿದರು.
ಶಿವಯೋಗ ನಗರ ನಿವಾಸಿಗಳಿಂದ ಅಹವಾಲು ಸ್ವಿಕರಿಸಿದರು. ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ, ಬಿಜೆಪಿ ಮುಖಂಡ ಉಮೇಶರಾವ ಬಂಟೋಡ್ಕರ ಮಾತನಾಡಿದರು.
ಸಂಕೊನಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ಬಾಸಿಂಗೆ, ಉಪಾಧ್ಯಕ್ಷೆ ದೀಪಾ ನಾಯಿಕ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ದಿವಾನಮಳ, ಮುಖಂಡರಾದ ಬಸವರಾಜ ಬುಟಾಳಿ, ನಿಂಗಪ್ಪ ನಂದೇಶ್ವರ, ಶಶಿಕಾಂತ ಸಾಳ್ವೆ, ಸಂಜಯ ಕುಟಕೊಳಿ, ಬಿ.ಎಸ್. ಯಾದವಾಡ, ತಾ.ಪಂ. ಇಒ ರವಿ ಬಂಗಾರೆಪ್ಪನವರ, ಪಿಡಿಒ ಸುರೇಶ ಮುಂಜೆ, ಸುಭಾಷ ಹುಬ್ಬಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.