ಚಿಕ್ಕೋಡಿ: ತಾಲ್ಲೂಕಿನಲ್ಲಿ ಕಳೆದೆರಡು ತಿಂಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ಬಳ್ಳಿ, ಗಿಡಗಂಟಿಗಳು ಹೇರಳವಾಗಿ ಬೆಳೆದು ವಿದ್ಯುತ್ ಕಂಬ, ತಂತಿ ಹಾಗೂ ಪರಿವರ್ತಕಗಳಿಗೆ ಸುತ್ತಿಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಸಂಕೇಶ್ವರ-ಜೇವರ್ಗಿ, ಮುಧೋಳ-ನಿಪ್ಪಾಣಿ ಹೆದ್ದಾರಿ ಬದಿಯ ಹಲವು ವಿದ್ಯುತ್ ಪರಿಕರಗಳಿಗೆ ಬಳ್ಳಿ ಸುತ್ತಿಕೊಂಡಿದೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ.
ವಿದ್ಯುತ್ ಪರಿಕರಗಳಿಗೆ ಹಬ್ಬಿದ ಈ ಬಳ್ಳಿ ನೋಡಲು ಅಂದವಾಗಿಯೇ ಕಾಣುತ್ತಿದೆ. ಆದರೆ, ಇದರ ಮೂಲಕ ನೆಲದಲ್ಲಿ ವಿದ್ಯುತ್ ಪ್ರವಹಿಸಿದರೆ ಜನರು–ಜಾನುವಾರುಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.
ದುರಸ್ತಿ ಕೆಲಸಕ್ಕೂ ಕಷ್ಟ:
ಚಿಕ್ಕೋಡಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ಕಂಬಕ್ಕೆ ಮರಗಳು ತಾಗಿ, ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಇನ್ನೂ ವಿದ್ಯುತ್ ಪರಿಕರಗಳಿಗೆ ಬಳ್ಳಿ ಸುತ್ತಿಕೊಂಡ ಕಾರಣ, ಯಾವುದೇ ದುರಸ್ತಿ ಕಾರ್ಯ ಕೈಗೊಳ್ಳಲು ಹೆಸ್ಕಾಂ ಸಿಬ್ಬಂದಿ ಪರದಾಡುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಬಳ್ಳಿಯೇ ಜೀವಕ್ಕೆ ಎರವಾಗುವ ಸಾಧ್ಯತೆ ಇದೆ.
ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿಕರಗಳು ಹೆದ್ದಾರಿ ಬದಿಯೇ ಇರುವುದರಿಂದ ವಾಹನಗಳ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ. ತ್ವರಿತವಾಗಿ ಇದನ್ನು ತೆರವುಗೊಳಿಸಿ, ಸುರಕ್ಷತೆಗೆ ಒತ್ತು ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಈ ಕುರಿತು ಪ್ರತಿಕ್ರಿಯೆಗಾಗಿ ಹೆಸ್ಕಾಂ ಅಧಿಕಾರಿಗಳನ್ನು ‘ಪ್ರಜಾವಾಣಿ’ ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.
ವಿದ್ಯುತ್ ಕಂಬದ ಸುತ್ತಲೂ ಗಿಡಗಂಟಿ ಬಳ್ಳಿ ಸಾಕಷ್ಟು ಬೆಳೆದಿವೆ. ಇದರಿಂದ ಜನರು ಆತಂಕದಿಂದ ಸಂಚರಿಸುವಂತಾಗಿದೆ. ತಕ್ಷಣವೇ ಬಳ್ಳಿ ತೆರವುಗೊಳಿಸಬೇಕುರೋಹಿಣಿ ದೀಕ್ಷಿತ ಸ್ಥಳೀಯರು ಚಿಕ್ಕೋಡಿ
ವಿದ್ಯುತ್ ಅವಘಡಗಳು ಸಂಭವಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳು ಬಳ್ಳಿ ತೆರವುಗೊಳಿಸಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.ಕೃಷ್ಣ ಕೆಂಚನ್ನವರ ಸಾಮಾಜಿಕ ಕಾರ್ಯಕರ್ತ ಕೇರೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.