
ಮಡಿವಾಳಯ್ಯ ಬಸವರಾಜ ಬಾನಿಮಠ
ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹2 ಕೋಟಿಗೂ ಅಧಿಕ ಬೆಲೆಬಾಳುವ ಜಮೀನು ಕಬಳಿಸಿದ ಆರೋಪದ ಮೇಲೆ ಹುಕ್ಕೇರಿ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಹಾಗೂ ಸಿಬ್ಬಂದಿ ಆನಂದ ಎಂ. ದಡ್ಡಿಮನಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಕುರಣಿ ಗ್ರಾಮದವರಾದ ರೇಣುಕಾ ಶಂಕರ ಮಾಳಿ, ಶಿವರುದ್ರ ಪ್ರಧಾನಿ ಕುದ್ನೂರಿ, ಕಾಶವ್ವ ಶಿವರುದ್ರ ಕುದ್ನೂರಿ, ನೀಲಕಂಠ ಶೆಟ್ಟೆಪ್ಪ ಮುದುಪಾಕಿ, ಸಿದ್ದಯ್ಯ ನಿರುಪಾದಯ್ಯ ಹಿರೇಮಠ, ವಿಜಯ ಶಿವಶಂಕರ ಮಠದ, ಅಶೋಕ ಸೂರ್ಯವಂಶಿ ಬಂಧಿತರು. ಇನ್ನೊಬ್ಬ ಆರೋಪಿ ಅಡಿವೆಪ್ಪ ಶೆಟ್ಟೆಪ್ಪ ಮುದುಪಾಕಿ ನಿಧನರಾಗಿದ್ದಾರೆ.
ಇದೇ ಊರಿನ ಶಿವಾನಂದ ಮಾರುತಿ ಕುದ್ನೂರಿ ದೂರುದಾರ ಎನ್ನುವವರು ದೂರು ನೀಡಿದ ಮೇಲೆ ಪ್ರಕರಣ ಪತ್ತೆಯಾಗಿದೆ. ಇದೇ ಆರೋಪಿಗಳು ತಂಡ ಮಾಡಿಕೊಂಡು ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.
2025ರ ಮೇ ತಿಂಗಳಲ್ಲಿ ಎಲ್ಲರೂ ಸೇರಿಕೊಂಡು ನಕಲಿ ಆಧಾರ್ ಕಾರ್ಡ್, ನಕಲು ಪಾನ್ಕಾರ್ಡ್ ಹಾಗೂ ಜಮೀನು ದಾಖಲೆಗಳನ್ನು ಸೃಷ್ಟಿ ಮಾಡಿದ್ದರು. ಕೊಳ್ಳುವವರು ಹಾಗೂ ಮಾರುವವರು ತಾವೇ ಎಂದು ಹೇಳಿಕೊಂಡು ಹುಕ್ಕೇರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವ್ಯವಹಾರ ಕುದುರಿಸಿದ್ದರು.
ಜಮೀನಿನ ಮಾಲೀಕರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಕಾರ್ಡ್ ಮಾಡಿ, ಅವರ ಭಾವಚಿತ್ರದ ಜಾಗದಲ್ಲಿ ಆರೋಪಿಯೊಬ್ಬನ ಭಾವಚಿತ್ರ ಅಂಟಿಸಿದ್ದರು. ಕೃತ್ಯಕ್ಕೆ ಬಳಸಿದ ಲ್ಯಾಪ್ಟಾಪ್, ಮೊಬೈಲ್ ಫೋನ್, 9 ನಕಲಿ ಆಧಾರ್ ಕಾರ್ಡ್,3 ನಕಲಿ ಪಾನ್ಕಾರ್ಡ್, 1 ನಕಲಿ ಮತದಾರರ ಗುರುತಿನ ಚೀಟಿ ಕೂಡ ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ದಾಖಲೆಗಳು ಅಶೋಕ ಸೂರ್ಯವಂಶಿ ಎನ್ನುವವರ ಫೋಟೊ ಸ್ಟುಡಿಯೊದಲ್ಲಿ ಪತ್ತೆಯಾಗಿವೆ ಎಂದು ಎಸ್ಪಿ ತಿಳಿಸಿದರು.
‘ಪ್ರಕರಣದ ತನಿಖೆ ನಡೆದಿದ್ದು, ಇನ್ನಷ್ಟು ಮಂದಿಯ ಗುಂಪು ಇರದಲ್ಲಿ ಭಾಗಿಯಾದ ಶಂಕೆ ಇದೆ. ಎಲ್ಲರನ್ನೂ ಶೀಘ್ರ ಬಂಧಿಸಲಾಗಿವುದು’ ಎಂದೂ ರಾಮರಾಜನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.