
ಮೂಡಲಗಿ: ‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದಾಗಿದ್ದು, ರೈತರು ಸಾರ್ವಕಾಲಿಕ ಗೌರವಕ್ಕೆ ಆರ್ಹರು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಹೇಳಿದರು.
ತಾಲ್ಲೂಕಿನ ರಾಜಾಪೂರ ಗ್ರಾಮದಲ್ಲಿ ಮೂಡಲಗಿ ತಾಲ್ಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆ ಮತ್ತು ತುಕ್ಕಾನಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೈತರು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಬೇಕು. ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳಿಂದ ಮುಕ್ತಗೊಳಿಸಿ ಆರೋಗ್ಯವಾದ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬೆಳಕೂಡ ‘ರೈತರು ಭೂಮಿಯಲ್ಲಿ ಶ್ರದ್ಧೆಯಿಂದ ದುಡಿದರೆ ಭೂತಾಯಿ ಎಂದಿಗೂ ಮೋಸ ಮಾಡುವುದಿಲ್ಲ’ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ, ‘ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಸೇವಕರನ್ನು ನೇಮಕ ಮಾಡಿ ರೈತರಿಗೆ ನಿರಂತರವಾಗಿ ಕೃಷಿ ಬಗ್ಗೆ ಮಾಹಿತಿ ದೊರೆಯುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.
ಕೃಷಿ ವಿಜ್ಞಾನಿ ಮಾಳವಾಡ, ಕಬ್ಬು ಬೆಳೆಯಲ್ಲಿ ಸುಧಾರಿತ ಬೇಸಾಯ, ಕೃಷಿ ವಿಜ್ಞಾನಿ ಪರುಶರಾಮ ಪಾಟೀಲ ಮಣ್ಣಿನ ಫಲವತ್ತತೆ ಕುರಿತು ಮಾತನಾಡಿದರು.
ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ವಿಠ್ಠಲ ಪಾಟೀಲ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಗದಾಡಿ, ಜಿಲ್ಲಾ ಪ್ರತಿನಿಧಿ ಅರವಿಂದ ಬಡಕುಂದ್ರಿ, ರಾಜು ಬೈರುಗೊಳ, ಬೈರಪ್ಪ ಯಕ್ಕುಂಡಿ, ಛಾಯಾ ಪಾಟೀಲ, ವಿನೋದ ಬಾಗಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.