ADVERTISEMENT

ಬೈಪಾಸ್‌ ರಸ್ತೆ ನಿರ್ಮಾಣ ವಿರೋಧಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 15:24 IST
Last Updated 17 ಮೇ 2019, 15:24 IST
ಬೆಳಗಾವಿ ತಾಲ್ಲೂಕಿನ ಧಾಮಣೆ ಗ್ರಾಮದ ಬಳಿ ಹಲಗಾ– ಮಚ್ಚೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಮಹಿಳೆಯೊಬ್ಬರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದರು
ಬೆಳಗಾವಿ ತಾಲ್ಲೂಕಿನ ಧಾಮಣೆ ಗ್ರಾಮದ ಬಳಿ ಹಲಗಾ– ಮಚ್ಚೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಮಹಿಳೆಯೊಬ್ಬರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದರು   

ಬೆಳಗಾವಿ: ತಾಲ್ಲೂಕಿನ ಧಾಮಣೆ ಗ್ರಾಮದ ಬಳಿ ಹಲಗಾ– ಮಚ್ಚೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಶುಕ್ರವಾರ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸರ ಜೊತೆ ತೀವ್ರ ವಾಗ್ವಾದ ನಡೆಸಿದರು.

‘ಹೊಲಗಳಲ್ಲಿ ಬೆಳೆದು ನಿಂತಿದ್ದ ಕಬ್ಬನ್ನು ತಮ್ಮ ಸಹಮತವಿಲ್ಲದೇ ಜೆಸಿಬಿ ಬಳಸಿ ನೆಲಸಮಗೊಳಿಸಲಾಗಿದೆ. ರೈತರನ್ನು ಹೆದರಿಸಿ, ಬೆದರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸರು ಕಾಮಗಾರಿ ನಡೆಸುತ್ತಿದ್ದಾರೆ’ ಎಂದು ರೈತ ಮುಖಂಡ ಅನಿಲ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಈ ಭಾಗದಲ್ಲಿ ಫಲವತ್ತಾದ ಭೂಮಿ ಇದೆ. ಇಲ್ಲಿ ರಸ್ತೆ ನಿರ್ಮಿಸಬಾರದೆಂದು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ, ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ನಮ್ಮನ್ನು ಕೇಳದೇ ಕಾಮಗಾರಿ ಪ್ರಾರಂಭಿಸಿದ್ದಾರೆ. ಇಲ್ಲಿ ಬೆಳೆದು ನಿಂತಿದ್ದ ಪೈರನ್ನು ಕಟಾವು ಮಾಡಿಕೊಳ್ಳಲು ಕೂಡ ಸಮಯಾವಕಾಶ ನೀಡಲಿಲ್ಲ’ ಎಂದು ಅಳಲು ತೋಡಿಕೊಂಡರು.

ADVERTISEMENT

ವಶಕ್ಕೆ:

ಕಬ್ಬನ್ನು ನೆಲಸಮಗೊಳಿಸುತ್ತಿದ್ದಾಗ ರೈತ ಮಹಿಳೆಯೊಬ್ಬರು ಜೆಸಿಬಿಗೆ ಅಡ್ಡಲಾಗಿ ನಿಂತರು. ಆಗ ಪೊಲೀಸರು ಅವರನ್ನು ಬಲವಂತವಾಗಿ ಕರೆದುತಂದರು. ಇವರ ಜೊತೆಗೆ ಕೆಲವು ರೈತರನ್ನು ವಶಕ್ಕೆ ಪಡೆದರು. ನಂತರ ಎಚ್ಚರಿಕೆ ನೀಡಿ, ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.