ರಾಯಬಾಗ: ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಪಟ್ಟಣದಲ್ಲಿ ರೈತ ಸಂಘ, ಹಸಿರು ಸೇನೆ, ಕರವೇ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಝೇಂಡಾಕಟ್ಟೆ ಬಳಿ ಸಮಾವೇಶಗೊಂಡರು. ರಸ್ತೆ ಬಂದ್ ಮಾಡಿದರು. ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ‘ಉದ್ದಿಮೆದಾರರಿಗೆ ಹಾಗೂ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಸರ್ಕಾರಗಳು ಬಂಡವಾಳಶಾಹಿಗಳ ಗುಲಾಮರಾಗಿವೆ’ ಎಂದು ದೂರಿದರು.
‘ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ತಹಶೀಲ್ದಾರ್ ಎನ್.ಬಿ. ಗೆಜ್ಜೆ ಅವರಿಗೆ ಮನವಿ ಸಲ್ಲಿಸಿದರು. ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಕರವೇ ಅಧ್ಯಕ್ಷ ಅಶೋಕ ಅಂಗಡಿ, ರೈತ ಸಂಘದ ಮುಖಂಡರಾದ ತ್ಯಾಗರಾಜ ಕದಮ, ಬಾಬುಗೌಡ ಪಾಟೀಲ, ರಮೇಶ ಕಲ್ಲಾರ, ಗುರುನಾಥ ಹೆಗಡೆ, ರಮೇಶ ಮಾಳಿ, ಕಲ್ಲನಗೌಡ ಪಾಟೀಲ, ಕಾಡೇಶ ಐಹೊಳೆ, ಸಂಗೀತಾ ಚಾವರೆ, ಉಜ್ವಾಲಾ ಬೇವನೂರೆ, ಸಾಗರ ಝೆಂಡೆನ್ನವರ, ತಮ್ಮಣ್ಣ ಪಾಟೀಲ, ಶಿವಾಜಿ ಪಾಟೀಲ, ಲಕ್ಷ್ಮಣ ತುಕ್ಕಾನಟ್ಟಿ, ಗಿರಿಮಲ್ಲ ಕಲ್ಲಾರ, ಯಲ್ಲಾಲಿಂಗ ಸಸಾಲಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.