
ಬೆಳಗಾವಿ: ಕಬ್ಬು ದರ ನಿಗದಿಗೆ ಒತ್ತಾಯಿಸಿ ಜಿಲ್ಲೆಯ ಗುರ್ಲಾಪುರ ಬಳಿ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದ ರೈತರು, ಶನಿವಾರ ಸಕ್ಕರೆ ಸಚಿವರ ಮನವಿ ಆಧರಿಸಿ ಪ್ರತಿಭಟನೆಯನ್ನು ವಾಪಸು ಪಡೆದಿದ್ದಾರೆ.
ಧರಣಿ ನಿರತರನ್ನು ಭೇಟಿಯಾದ ಸಚಿವರು, ‘ದರ ಗೊಂದಲಕ್ಕೆ ಕೇಂದ್ರ ಕಾರಣ. ರೈತರ ಮೇಲಿನ ಕಾಳಜಿಗೆ ನಾವು ಏನು ಮಾಡಲು ಸಾಧ್ಯವೋ ಮಾಡಿದ್ದೇವೆ. ಧರಣಿ ಕೈಬಿಡಬೇಕು‘ ಎಂದು ಕೋರಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಅಧ್ಯಕ್ಷ ಚೂಣಪ್ಪ ಪೂಜಾರಿ ಧರಣಿ ಕೈಬಿಡಲಾಗಿದೆ ಎಂದು ಪ್ರಕಟಿಸಿದರು.
ಸಂಜೆ ಸಭೆ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ, ಸಂಯುಕ್ತ ಹೋರಾಟ ಕರ್ನಾಟಕದ (ವಿವಿಧ ಸಂಘಟನೆ) ನಾಯಕರು, ‘ಸರ್ಕಾರ ಘೋಷಿಸಿರುವ ₹3,300 ದರ ಒಪ್ಪುವುದಿಲ್ಲ. ಹೋರಾಟ ತಾತ್ಕಾಲಿಕವಾಗಿ ಅಂತ್ಯವಾಗಿದೆ. ಈ ಬಗ್ಗೆ ಕೇಂದ್ರಕ್ಕೆ ನಿಯೋಗ ಒಯ್ಯಬೇಕು’ ಎಂದು ಒತ್ತಾಯಿಸಿದರು.
ಪರಿಷ್ಕೃತ ದರ, ಆದೇಶ ಪ್ರಕಟ: ಟನ್ ಕಬ್ಬಿಗೆ ನಿಗದಿಪಡಿಸಿದ್ದ ಪರಿಷ್ಕೃತ ದರಕ್ಕೆ ಸಂಬಂಧಿಸಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಸಕ್ಕರೆ) ಶನಿವಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರವು 2025–26ನೇ ಸಾಲಿನ ಹಂಗಾಮಿಗೆ ಅನ್ವಯವಾಗಲಿದೆ ಎಂದು ಆದೇಶ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.