ADVERTISEMENT

23 ಸ್ಥಳಗಳಲ್ಲಿ ‘ಫ್ಲೂ ಕ್ಲಿನಿಕ್‌’ ಪ್ರಾರಂಭಿಸಿದ ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 12:55 IST
Last Updated 10 ಏಪ್ರಿಲ್ 2020, 12:55 IST
ಬೆಳಗಾವಿಯ ವಡಗಾಂವ ಶಾಲೆಯಲ್ಲಿ ಶಾಸಕ ಅಭಯ ಪಾಟೀಲ ಆರಂಭಿಸಿರುವ ಫ್ಲೂ ಕ್ಲಿನಿಕ್‌ದಲ್ಲಿ ವೈದ್ಯರು ಮಗುವೊಂದಕ್ಕೆ ಚಿಕಿತ್ಸೆ ನೀಡಿದರು
ಬೆಳಗಾವಿಯ ವಡಗಾಂವ ಶಾಲೆಯಲ್ಲಿ ಶಾಸಕ ಅಭಯ ಪಾಟೀಲ ಆರಂಭಿಸಿರುವ ಫ್ಲೂ ಕ್ಲಿನಿಕ್‌ದಲ್ಲಿ ವೈದ್ಯರು ಮಗುವೊಂದಕ್ಕೆ ಚಿಕಿತ್ಸೆ ನೀಡಿದರು   

ಬೆಳಗಾವಿ: ಕೊರೊನಾ ವೈರಾಣು ಭೀತಿಯ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿದ್ದು, ಜನರಿಗೆ ಆರೋಗ್ಯ ಸೇವೆ ದೊರಕಿಸಿಕೊಡಲು ಶಾಸಕ ಅಭಯ ಪಾಟೀಲ ತಮ್ಮ ಮತಕ್ಷೇತ್ರದ 23 ಸ್ಥಳಗಳಲ್ಲಿ ‘ಫ್ಲೂ ಕ್ಲಿನಿಕ್‌’ಗಳನ್ನು ಶುಕ್ರವಾರ ಆರಂಭಿಸಿದ್ದಾರೆ. ಮೊದಲ ದಿನವೇ ಸಾವಿರಾರು ಜನರು ವೈದ್ಯಕೀಯ ಸೇವೆ ಪಡೆದುಕೊಂಡರು.

ಒಂದೆಡೆ ಸರ್ಕಾರಿ ವೈದ್ಯರು ಕೊರೊನಾ ವಿರುದ್ಧ ಸೆಣಸಾಡುತ್ತಿದ್ದರೆ, ಮತ್ತೊಂದೆಡೆ ಹಲವು ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ಬಂದ್‌ ಮಾಡಿದ್ದರು. ಹೀಗಾಗಿ ಸಾಮಾನ್ಯ ಕಾಯಿಲೆಗಳಾದ ಕೆಮ್ಮು, ನೆಗಡಿ, ಮೈ ಕೈ ನೋವಿಗೂ ಚಿಕಿತ್ಸೆ ಪಡೆಯಲು ಜನರು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಅಭಯ ಪಾಟೀಲ ಅವರು, ಕೆಲವು ಖಾಸಗಿ ವೈದ್ಯರು ಹಾಗೂ ಸರ್ಕಾರಿ ವೈದ್ಯರ ಸಹಕಾರದಿಂದ ಸರ್ಕಾರಿ ಶಾಲೆ ಹಾಗೂ ಮಂಗಲ ಕಾರ್ಯಾಲಯಗಳಲ್ಲಿ ಫ್ಲೂ ಕ್ಲಿನಿಕ್‌ಗಳನ್ನು ಆರಂಭಿಸಿದ್ದಾರೆ.

ಬೆಳಿಗ್ಗೆ 9ರಿಂದ 12ರವರೆಗೆ– ಕಪಿಲೇಶ್ವರ ಕಾಲೊನಿಯ ಭಾತಕಾಂಡೆ ಸ್ಕೂಲ್‌, ಶಾಸ್ತ್ರಿ ನಗರದ ಕೆ.ಬಿ.ಎಸ್‌. ನಂ14, ಕಚೇರಿ ಗಲ್ಲಿಯ ಕೆ.ಬಿ.ಎಸ್‌. ನಂ.8, ಖಾಸಭಾಗದ ಕೆ.ಬಿ.ಎಸ್‌. ನಂ.3, ವಡಗಾಂವ ಚಾವಡಿಯ ಕೆ.ಜಿ.ಎಸ್‌.ನಂ.5, ಭಾರತ ನಗರದ ಕೆ.ಬಿ.ಎಸ್‌. ನಂ.17, ಹಳೇ ಬೆಳಗಾವಿಯ ಎಂ.ಬಿ.ಎಸ್‌. ನಂ.33, ವಡಗಾಂವದ ಮಲಪ್ರಭಾ ನಗರದ ಕೆ.ಬಿ.ಎಸ್‌. ನಂ.15, ರೈತ ಗಲ್ಲಿಯ ಎಂ.ಬಿ.ಎಸ್‌.ನಂ. 32, ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯ, ಅನಗೋಳದ ಸಂತ ಮೀರಾ ಶಾಲೆ, ಎಂ.ಬಿ.ಎಸ್‌. ನಂ.6 ಹಾಊ ಎಂ.ಬಿ.ಎಸ್‌. ನಂ.34ದಲ್ಲಿ ಕ್ಲಿನಿಕ್‌ ಆರಂಭಗೊಂಡಿವೆ.

ADVERTISEMENT

ಮಧ್ಯಾಹ್ನ 3ರಿಂದ 6ರವರೆಗೆ– ಅನಗೋಳದ ಆದಿತ್ಯನಾಥ ಮಂಗಲ ಕಾರ್ಯಾಲಯ, ಇಂದಿರಾನಗರದ ಕೆ.ಬಿ.ಎಸ್‌. ನಂ.18, ವೈಜೆ ಗಲ್ಲಿಯ ಎಂ.ಬಿ.ಎಸ್‌. ನಂ.5, ಮಜಗಾಂವಿಯ ಎಂ.ಜಿ.ಎಸ್‌.ನಂ.19, ಗೊಡ್ಲೇವಾಡಿಯ ಕೆ.ಬಿ.ಎಸ್‌. ನಂ.38, ವ್ಯಾಕ್ಸಿನ್‌ ಡಿಪೊ, ಟಿಳಕವಾಡಿಯ ಗಜಾನನ ಮಹಾರಾಜ ನಗರದ ಕೆ.ಬಿ.ಎಸ್‌., ವಡಗಾಂವದ ಎಂ.ಬಿ.ಎಸ್‌.ನಂ.31, ಧಾಮಣೆ ರಸ್ತೆಯ ಯು.ಎಲ್‌.ಪಿ.ಎಸ್‌. ನಂ.7, ಜಯವಂತಿ ಮಂಗಲ ಕಾರ್ಯಾಲಯ ಹಾಗೂ ಉದ್ಯಮಬಾಗ್‌ದ ಡಿ.ಐ.ಸಿ ಕಚೇರಿಯಲ್ಲಿ ತಾತ್ಕಾಲಿಕವಾಗಿ ಕ್ಲಿನಿಕ್‌ ತೆರೆಯಲಾಗಿದೆ.

ಇಲ್ಲಿ ವೈದ್ಯರ ಸೇವೆಯ ಜೊತೆ ಉಚಿತವಾಗಿ ಔಷಧಿಗಳನ್ನೂ ವಿತರಿಸಲಾಗುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಕೊರೊನಾ ವೈರಾಣು ತಡೆಯಬಲ್ಲ ಪಿಪಿಇ ಕಿಟ್‌ಗಳನ್ನು ಅಭಯ ಪಾಟೀಲ ಉಚಿತವಾಗಿ ನೀಡಿದ್ದಾರೆ. ರೋಗಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡೇ ಚಿಕಿತ್ಸೆ ಪಡೆದರು. ಕೈಗೆ ಸ್ಯಾನಿಟೈಸರ್‌ ಬಳಸುವುದು ಹಾಗೂ ಮುಖಕ್ಕೆ ಮಾಸ್ಕ್‌ ಕಟ್ಟಿಕೊಳ್ಳುವ ಮೂಲಕ ಎಲ್ಲ ಅಗತ್ಯವಾದ ಮುಂಜಾಗ್ರತೆಗಳನ್ನು ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.