ADVERTISEMENT

ಬಡವರು, ನಿರ್ಗತಿಕರಿಗೆ ಉಚಿತ ಆಹಾರ

ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಸೌಥ್‌, ನಿಯಾಜ್‌ ಹೋಟೆಲ್‌ನಿಂದ ಜಂಟಿ ‘ಅನ್ನದಾನ’ ಯೋಜನೆ

ಶ್ರೀಕಾಂತ ಕಲ್ಲಮ್ಮನವರ
Published 14 ನವೆಂಬರ್ 2018, 19:41 IST
Last Updated 14 ನವೆಂಬರ್ 2018, 19:41 IST
‘ಅನ್ನದಾನ’ ಯೋಜನೆಗಾಗಿ ಸಿದ್ಧವಾಗಿರುವ ರೆಫ್ರಿಜರೇಟರ್‌
‘ಅನ್ನದಾನ’ ಯೋಜನೆಗಾಗಿ ಸಿದ್ಧವಾಗಿರುವ ರೆಫ್ರಿಜರೇಟರ್‌   

ಬೆಳಗಾವಿ: ಬಡವರು, ಅನಾಥರು ಹಾಗೂ ನಿರ್ಗತಿಕರಿಗಾಗಿ ದಿನದ 24 ತಾಸೂ ಉಚಿತವಾಗಿ ಆಹಾರ ಒದಗಿಸಲು ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಸೌಥ್‌ ಹಾಗೂ ನಿಯಾಜ್‌ ಹೋಟೆಲ್‌ ಜಂಟಿಯಾಗಿ ‘ಅನ್ನದಾನ’ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದೇ ತಿಂಗಳ 16ಕ್ಕೆ ಚಾಲನೆ ದೊರೆಯಲಿದೆ.

ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದ ಬಳಿಯಿರುವ ನಿಯಾಜ್‌ ಹೋಟೆಲ್‌ ಆವರಣದಲ್ಲಿ 240 ಲೀಟರ್‌ ರೆಫ್ರಿಜರೇಟರ್‌ ಇರಿಸಿ, ಅದರಲ್ಲಿ ಅನ್ನ, ಸಾಂಬಾರ, ತಂದೂರಿ ರೋಟಿ, ಚಪಾತಿ, ಬ್ರೆಡ್‌, ಹಣ್ಣುಗಳನ್ನು ಪ್ಯಾಕ್‌ ಮಾಡಿ ಇಡಲಾಗುವುದು. ಹೋಟೆಲ್‌ನಲ್ಲಿ ಹಣ ಕೊಟ್ಟು ಊಟ ಮಾಡಲು ಸಾಧ್ಯವಾಗದ ಬಡವರು, ನಿರ್ಗತಿಕರು ಈ ಆಹಾರವನ್ನು ಸೇವಿಸಬಹುದು ಎಂದು ರೋಟರಿ ಕ್ಲಬ್‌ನ ಇವೆಂಟ್‌ ಚೇರ್‌ಮನ್‌ ವೀರಧವಲ ಉಪಾಧ್ಯೆ ‘ಪ್ರಜಾವಾಣಿ’ಗೆ ತಿಳಿಸಿದರು.

ರೆಫ್ರಿಜರೇಟರ್‌ ಹಾಗೂ ಆಹಾರವನ್ನು ರೋಟರಿ ಕ್ಲಬ್‌ ಒದಗಿಸಿದೆ. ಸ್ಥಳಾವಕಾಶ, ವಿದ್ಯುತ್‌ ಪೂರೈಕೆ ಹಾಗೂ ಆಹಾರವನ್ನು ನಿಯಾಜ್‌ ಹೋಟೆಲ್‌ನವರು ಒದಗಿಸುತ್ತಾರೆ. ರೆಫ್ರಿಜರೇಟರ್‌ ನಿರ್ವಹಣೆಯನ್ನು ಕೂಡ ಹೋಟೆಲ್‌ನವರು ಮಾಡಲಿದ್ದಾರೆ. ಇಲ್ಲಿ ಇಡಲಾಗುವ ಆಹಾರವು ತಾಜಾ ಆಹಾರವಾಗಿರುತ್ತದೆ. ಹೊರತು, ತಂಗಳ ಇರುವುದಿಲ್ಲ.

ADVERTISEMENT

ಇಂತಹ ಯೋಜನೆಯು ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆರಂಭಿಸಲಾಗಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತರೆ ನಗರದ ಇತರ ಏಳು ಸ್ಥಳಗಳಲ್ಲಿ ಆರಂಭಿಸಲು ರೋಟರಿ ಸದಸ್ಯರು ನಿರ್ಧರಿಸಿದ್ದಾರೆ.

ಹಬ್ಬದ ದಿನಗಳಲ್ಲಿ ವಿಶೇಷ ತಿಂಡಿ

ಹಬ್ಬದ ದಿನಗಳಲ್ಲಿ ವಿಶೇಷ ತಿಂಡಿಗಳು ಇಲ್ಲಿ ದೊರೆಯಲಿವೆ. ಹಿಂದೂ ಧರ್ಮಿಯರ ಹಬ್ಬದ ಸಂದರ್ಭಗಳಲ್ಲಿ ಸಿಹಿ ಊಟ ದೊರೆಯಲಿದೆ. ಮುಸ್ಲಿಮರ ಹಬ್ಬದ ದಿನಗಳಲ್ಲಿ ಮಾಂಸದ ಊಟ ದೊರೆಯಲಿದೆ.

ಪರಿಕಲ್ಪನೆ ಹುಟ್ಟಿದ್ದು

ಬಡವರು, ನಿರ್ಗತಿಕರು ಹಾಗೂ ಊರಿಗೆ ಹೊರಟ ಸಂದರ್ಭದಲ್ಲಿ ಹಣ ಕಳೆದುಕೊಂಡವರು ಬಸ್‌ ಸ್ಟ್ಯಾಂಡ್‌ ಬಳಿ ಆಹಾರಕ್ಕಾಗಿ ಅಂಗಲಾಚುತ್ತಿರುವುದನ್ನು ಹಲವು ಬಾರಿ ನೋಡಿದ್ದೇವು. ಆಗ, ‘ಅನ್ನದಾನ’ದ ಯೋಚನೆ ಹುಟ್ಟಿಕೊಂಡಿತು. ನಗರದ ಪ್ರಮುಖ ಹೋಟೆಲ್‌ ಆಗಿರುವ ನಿಯಾಜ್‌ ಆಡಳಿತ ಮಂಡಳಿಯವರ ಜೊತೆ ಚರ್ಚಿಸಿದೇವು. ನಮ್ಮೊಂದಿಗೆ ಕೈ ಜೋಡಿಸಲು ಅವರು ಒಪ್ಪಿಕೊಂಡರು ಎಂದು ರೋಟರಿ ಸದಸ್ಯ ಜಯಸಿಂಹ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.