ADVERTISEMENT

ಕಿಶೋರಿಯರನ್ನು ಅಪೌಷ್ಟಿಕತೆಯಿಂದ ಹೊರತರಬೇಕು: ವೈದ್ಯಾಧಿಕಾರಿ ಡಾ.ಕೀರ್ತಿ

ಯರಗಟ್ಟಿ ಕೆಪಿಎಸ್‌ನಲ್ಲಿ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 8:32 IST
Last Updated 6 ಸೆಪ್ಟೆಂಬರ್ 2020, 8:32 IST
ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯು ಹುಕ್ಕೇರಿ ತಾಲ್ಲೂಕಿನ ಯರಗಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆಯ ನೋಟ
ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯು ಹುಕ್ಕೇರಿ ತಾಲ್ಲೂಕಿನ ಯರಗಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆಯ ನೋಟ   

ಬೆಳಗಾವಿ: ‘ಕಿಶೋರಿಯರಲ್ಲಿ ಹೆಚ್ಚಿನವರು ಕುಪೋಷಣೆಗೆ ಒಳಗಾಗಿದ್ದಾರೆ. ಆಟ–ಪಾಠದೊಂದಿಗೆ ಬೆಳೆಯಬೇಕಾದ ಮಕ್ಕಳು ಹಾಸಿಗೆ ಹಿಡಿಯುತ್ತಿದ್ದಾರೆ ಎಂದರೆ ಅದಕ್ಕೆ ಅವರಲ್ಲಿರುವ ಅಪೌಷ್ಟಿಕತೆಯೇ ಕಾರಣ’ ಎಂದು ವೈದ್ಯಾಧಿಕಾರಿ ಡಾ.ಕೀರ್ತಿ ಹೇಳಿದರು.

ಇಲ್ಲಿನ ಮಹಿಳಾ ಕಲ್ಯಾಣ ಸಂಸ್ಥೆಯು ಹುಕ್ಕೇರಿ ತಾಲ್ಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯರನಾಳ, ಹೊಸೂರ, ನಿರ್ವಾಣಹಟ್ಟಿ, ಬಡಕುಂದ್ರಿ ಗ್ರಾಮದ ಕಿಶೋರಿಯರಿಗಾಗಿ ಆಯೋಜಿಸಿದ್ದ ‘ಪೌಷ್ಟಿಕಾಂಶ ಅಭಿಯಾನ’ದ ಅಂಗವಾಗಿ ನಡೆದ ಆರೋಗ್ಯ ತಪಾಸಣೆ ಮತ್ತು ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಸೇವಿಸಬೇಕಾದ ಆಹಾರ, ಅವುಗಳಲ್ಲಿರುವ ಸತ್ವದ ಕುರಿತು ಗ್ರಾಮೀಣ ಮಕ್ಕಳಲ್ಲಿ ಮತ್ತು ತಾಯಂದಿರಲ್ಲಿ ಅರಿವಿನ ಕೊರತೆ ಇದೆ. ಅದಕ್ಕಾಗಿ ರಕ್ತಹೀನತೆಯಿಂದ ಅನೇಕ ಸಮಸ್ಯೆಗಳಾಗುತ್ತಿವೆ. ಮುಖ್ಯವಾಗಿ ಕಿಶೋರಿಯರನ್ನು ಕುಪೋಷಣೆಯಿಂದ ಹೊರ ತಂದು ಸದೃಢ ಕುಟುಂಬ ಮತ್ತು ರಾಷ್ಟ್ರ ನಿರ್ಮಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ADVERTISEMENT

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎ. ಕರಗುಪ್ಪಿ, ‘ವೈವಿಧ್ಯಮಯ ಹಣ್ಣುಗಳು, ಹಸಿ ತರಕಾರಿ, ಕಾಳುಗಳು, ಹಾಲು ಮೊದಲಾದವು ಗ್ರಾಮೀಣ ಪ್ರದೇಶದಲ್ಲಿ ಲಭ್ಯ ಇವೆ. ಆದರೆ, ಅವುಗಳನ್ನು ಹೇಗೆ ಆಹಾರದಲ್ಲಿ ಬಳಸಬೇಕು ಎನ್ನುವ ಜಾಗೃತಿ ಇಲ್ಲದಿರುವುದರಿಂದ ಕಾಯಿಲೆಗೆ ತುತ್ತಾಗುತ್ತಿದ್ದಾರೆ’ ಎಂದರು.

‘ವಿದ್ಯಾರ್ಥಿಗಳು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ನಿಯಮಿತ ವ್ಯಾಯಮ ಮಾಡಬೇಕು. ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಸಲಹೆ ನೀಡಿದರು.

60 ಕಿಶೋರಿಯರ ಆರೋಗ್ಯ ಮತ್ತು ರಕ್ತ ತಪಾಸಣೆ ನಡೆಸಲಾಯಿತು.

ಭಾರತೀಯ ಕುಟುಂಬ ಯೋಜನಾ ಸಂಘದ ಶ್ರೀದೇವಿ, ಸಲಹೆಗಾರರಾದ ಲಕ್ಷ್ಮಿ, ಶಾರದಾ, ಆರೋಗ್ಯ ಸಹಾಯಕಿ ಪ್ರಿಯಾಂಕಾ ಉಂಡಿ, ಶಾಹಿನ್ ಹೋಂಬಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.