ADVERTISEMENT

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್: ಜಿಐಟಿ ಪ್ರಥಮ

ಸತತ 2ನೇ ಬಾರಿ ಗೆಲುವು, ₹ 1 ಲಕ್ಷ ಬಹುಮಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 14:42 IST
Last Updated 15 ಏಪ್ರಿಲ್ 2019, 14:42 IST
ಕೇಂದ್ರ ಸರ್ಕಾರ ನಡೆಸಿದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ನಲ್ಲಿ ಬೆಳಗಾವಿಯ ಜಿಐಟಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿದೆ
ಕೇಂದ್ರ ಸರ್ಕಾರ ನಡೆಸಿದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ನಲ್ಲಿ ಬೆಳಗಾವಿಯ ಜಿಐಟಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿದೆ   

ಬೆಳಗಾವಿ: ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ವೈಷ್ಣವಿ ಹರಿಕಾಂತ, ಅಪರ್ಣಾ ಮನೋಹರ್, ಅಮಿತ್ ಹಣ್ಣಿಕೇರಿ, ರಾಹುಲ್ ಮಹೇಂದ್ರಕರ, ತನ್ವಿಶ್ ಮಿನಾಚೆ ಮತ್ತು ವೈಭವ್ ಕುಲಕರ್ಣಿ ಒಳಗೊಂಡ ‘ಟೆಕ್ ಫನಾಟಿಕ್’ ತಂಡವು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್–19’ರಲ್ಲಿ ಪ್ರಥಮ ಸ್ಥಾನದೊಂದಿಗೆ ₹ 1 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡಿದೆ.

ಈ ತಂಡವು ಸ್ಯಾಮ್‌ಸಂಗ್ ಕಂಪನಿಯು ಸಂಶೋಧನೆ ಹಾಗೂ ಅಭಿವೃದ್ಧಿಗೆ ನೀಡಿದ್ದ ‘ಈಕೋ ಡ್ರೈವ್ ಗೋಲ್–ರೆಡ್ಯೂಸ್ ಕಾರ್ಬನ್ ಫುಟ್ ಪ್ರಿಂಟ್ ಆಫ್ ದಿ ಟ್ರಾವೆಲ್ ಪ್ರಪೋಸಲ್ ಬೈ ಬಿಲ್ಡಿಂಗ್ ಎ ಸ್ಮಾರ್ಟ್‌ಫೋನ್‌ ಆಫ್‌ ದ್ಯಾಟ್ ಹೆಲ್ಫ್ಸ್ ಯು ಟು ಕಾರ್ /ಬೈಕ್ ಪೂಲ್’ ತಾಂತ್ರಿಕ ಯೋಜನೆಯಲ್ಲಿ ಕೆಲಸ ಮಾಡಿದೆ.

‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಆಯೋಜಿಸುವ ನಿರಂತರ ಸ್ಪರ್ಧೆಯಾಗಿದೆ. ಅಲ್ಲಿ ತಂತ್ರಜ್ಞಾನ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನವೀನ, ಸ್ಮಾರ್ಟ್ ಪರಿಹಾರಗಳಿಗಾಗಿ ಸಮಸ್ಯೆಗಳನ್ನು ನೀಡಲಾಗುತ್ತದೆ. 2019ರಲ್ಲಿ 2 ಉಪ ಆವೃತ್ತಿಗಳನ್ನು (ಸಾಫ್ಟ್‌ವೇರ್‌ ಮತ್ತು ಯಂತ್ರಾಂಶ (ಹಾರ್ಡ್‌ವೇರ್) ನಡೆಸಲಾಗಿದೆ.

ADVERTISEMENT

ವಿವಿಧ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಸರ್ಕಾರಿ ಸ್ವಾಮ್ಯದ ಹಲವು ಸಾರ್ವಜನಿಕ ವಲಯದ ಕಂಪನಿಗಳು ಹಾಗೂ ಹೆಸರಾಂತ ಬಹುರಾಷ್ಟ್ರೀಯ ಕಂಪನಿಗಳು ವಿದ್ಯಾರ್ಥಿಗಳಿಗೆ ತಾಂತ್ರಿಕ ಸವಾಲು, ಸಮಸ್ಯೆ ಹಾಗೂ ಯೋಜನೆಗಳನ್ನು ನೀಡಿದ್ದವು. ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಸಂಸ್ಥೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 550 ತಾಂತ್ರಿಕ ಯೋಜನೆಗಳನ್ನು ವ್ಯಾಖ್ಯಾನಿಸಲಾಗಿತ್ತು. 25ಸಾವಿರ ವಿದ್ಯಾರ್ಥಿಗಳ ತಂಡಗಳು 57ಸಾವಿರಕ್ಕಿಂತ ಹೆಚ್ಚಿನ ತಾಂತ್ರಿಕ ಪರಿಹಾರಗಳನ್ನು ಆಯ್ಕೆ ಸುತ್ತಿನಲ್ಲಿ ನೀಡಿದ್ದರು. ಕಠಿಣ ಮೌಲ್ಯಮಾಪನದ ನಂತರ ದೇಶದ 1,500 ತಂಡಗಳನ್ನು ರಾಷ್ಟ್ರಮಟ್ಟದ ಪ್ರಶಸ್ತಿ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.

ಜಿಐಟಿಯ ಸೃಷ್ಟಿ ಪಾಟೀಲ, ಸಿಂಚನ ಶಾನಭಾಗ, ನಿಶಾ ಪುರಿ, ಮೇಘಾನಾ ಜಿ, ನಿತಿನ್ ಭೂಯ್ಯರ್, ಎಂ. ಶೋಹೆಬ್ ಮೇಟಿ, ಸ್ಫೂರ್ತಿ ಕಾಳೆ, ಶಿವಾನಿ ಹಂದಿಗೋಲ್, ಶಾಹೀನ್ ಹವಾಲ್ದಾರ, ಸಂಜೀದ ಗುಂಡಕ್ಕಲ್ಲಿ, ಚೈತ್ರಾಲಿ ಕುಲಕರ್ಣಿ, ಸುಧಾರಾಣಿ ಪಾಟೀಲ, ಸುಧಾಂಶು ಶೇಖರ್, ಶುಭಂ ದೇಶಪಾಂಡೆ, ಶ್ರೀಲಕ್ಷ್ಮಿ ದೇಸಾಯಿ, ಸಿಂಚನ ಶೆಟ್ಟಿ, ಶಿವಾನಿ ಪಾಟೀಲ, ಸ್ನೇಹಾ ಔದುಗೌಡರ, ವೈಷ್ಣವಿ ಹರಿಕಾಂತ, ಅಪರ್ಣಾ ಮನೋಹರ್, ಅಮಿತ್ ಹಣ್ಣಿಕೇರಿ, ರಾಹುಲ್ ಮಹೇಂದ್ರಕರ, ತನ್ವಿಶ್ ಮಿನಾಚೆ ಮತ್ತು ವೈಭವ್ ಕುಲಕರ್ಣಿ ಸೇರಿದಂತೆ 25 ವಿದ್ಯಾರ್ಥಿಗಳನ್ನು ಒಳಗೊಂಡ 4 ತಂಡಗಳು ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದವು. ಇದರಲ್ಲಿ ಒಂದು ತಂಡ ಪ್ರಥಮ ಸ್ಥಾನ ಗಳಿಸಿದೆ. ಉಳಿದವು ನಿರ್ಣಾಯಕರ ವಿಶೇಷ ಪ್ರಶಂಸೆಗೆ ಒಳಗಾಗಿವೆ. ಕಳೆದ ಬಾರಿ 2 ತಂಡಗಳು ಬೇರೆ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಗಳಿಸಿದ್ದವು.

ವಿದ್ಯಾರ್ಥಿಗಳಿಗೆ ಸಂತೋಷ್ ಸರಾಫ್, ಪ್ರೊ.ಗಜೇಂದ್ರ ದೇಶಪಾಂಡೆ, ಪ್ರೊ.ರಾಹುಲ ಕುಲಕರ್ಣಿ, ಆನಂದ ದೇಶಪಾಂಡೆ, ವಿನೀತ ಕುಲಕರ್ಣಿ, ಪ್ರೊ.ಅಜಯ್ ಆಚಾರ್ಯ, ಆರ್. ತ್ಯಾಗಿ, ವೀಣಾ ಮಾವರ್ಕರ್, ಪ್ರೊ.ಮಂಜುಳಾ ರಾಮಣ್ಣವರ ಮತ್ತು ಪ್ರೊ.ವೈದೇಹಿ ದೇಶಪಾಂಡೆ ಮಾರ್ಗದರ್ಶನ ನೀಡಿದ್ದರು.

ತಂಡವನ್ನು ಕೆಎಲ್ಎಸ್‌ ಸಂಸ್ಥೆ ಕಾರ್ಯಾಧ್ಯಕ್ಷ ಎಂ.ಆರ್. ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ, ಪ್ರಾಂಶುಪಾಲ ಎ.ಎಸ್. ದೇಶಪಾಂಡೆ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.