ಮೂಡಲಗಿ: ‘ಮೂಡಲಗಿ, ಗೋಕಾಕ, ರಾಮದುರ್ಗ ಹಾಗೂ ಯರಗಟ್ಟಿ ತಾಲ್ಲೂಕುಗಳಲ್ಲಿರುವ ಮಾಜಿ ಸೈನಿಕರಿಗೆ ಗೋಕಾಕದಲ್ಲಿ ಆರ್ಮಿ ಕ್ಯಾಂಟಿನ್ ಸ್ಥಾಪನೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಮಾಡಿಕೊಂಡಿದ್ದಕ್ಕೆ ಸಚಿವರು ಸ್ಪಂದಿಸಿ ಗೋಕಾಕದಲ್ಲಿ ಆರ್ಮಿ ಕ್ಯಾಂಟೀನ್ಗೆ ಅನುಮೋದನೆ ನೀಡಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಸಂಸದರ ಸಂಪರ್ಕ ಕಚೇರಿಯಲ್ಲಿ ಮೂಡಲಗಿ, ಗೋಕಾಕ, ರಾಮದುರ್ಗ, ಯರಗಟ್ಟಿ ತಾಲ್ಲೂಕುಗಳ ಮಾಜಿ ಸೈನಿಕರ ಸಂಘಗಳ ಪದಾಧಿಕಾರಿಗಳು ಭಾನುವಾರ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ದೇಶ ಕಾಯುವ ಸೈನಿಕರು ಮತ್ತು ಅನ್ನ ನೀಡುವ ರೈತರು ಸಮಾಜದ ಎರಡು ಕಣ್ಣುಗಳು ಇದ್ದಂತೆ ಅವರ ಬೆನ್ನಿಗೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಮೂಡಲಗಿ ತಾಲ್ಲೂಕು ಸೇರಿದಂತೆ ಪಕ್ಕದ ತಾಲ್ಲೂಕುಗಳಲ್ಲಿ 15 ಸಾವಿರಕ್ಕೂ ಅಧಿಕ ಮಾಜಿ ಸೈನಿಕರು ವಾಸವಾಗಿದ್ದಾರೆ. ಗೃಹಪಯೋಗಿ ವಸ್ತುಗಳನ್ನು ಖರೀದಿಸಲು ಬೆಳಗಾವಿಗೆ ತೆರಳಬೇಕಾಗಿತ್ತು. ತಮ್ಮ ಕಷ್ಟವನ್ನು ಮಾಜಿ ಸೈನಿಕರು ನನ್ನ ಗಮನಕ್ಕೆ ತಂದಿದ್ದರ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ಗಮನಕ್ಕೆ ತಂದಿದ್ದು ಈಗ ಅದು ಫಲಕಾರಿಯಾಗಿದೆ. ರಕ್ಷಣಾ ಸಚಿವರ ಕಾರ್ಯವನ್ನು ಶ್ಲಾಘನೀಯವಾಗಿದೆ ಎಂದರು.
ಕೇಂದ್ರ ರಕ್ಷಣಾ ಇಲಾಖೆಯ ನಿರ್ದೇಶನದಂತೆ ಗೋಕಾಕ ನಗರದಲ್ಲಿ ಆರ್ಮಿ ಕ್ಯಾಂಟೀನ್ ಸ್ಥಾಪನೆಗೆ ಭೂಮಿಯನ್ನು ಗುರುತಿಸಲು ಸ್ಥಳೀಯ ಅಧಿಕಾರಿಗಳಿಗೆ ಇಲಾಖೆಯಿಂದ ನಿರ್ದೇಶನ ನೀಡಿರುತ್ತಾರೆ ಎಂದರು.
ಮೂಡಲಗಿ ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚರಂತಯ್ಯ ಮಳ್ಳಿಮಠ, ಗೋಕಾಕ ತಾಲೂಕು ಅಧ್ಯಕ್ಷ ಫಕೀರಪ್ಪ ಗೌಡರ, ಪಂಡಿತಪ್ಪ ಕಾಂಬಳೆ, ಪ್ರಕಾಶ ಕರೆಪ್ಪಗೋಳ, ರಾಮಪ್ಪ ಮುಗಳಖೋಡ, ಸುಭಾಸ ಪಾಟೀಲ, ಅರ್ಜುನ ಕೋಲುರ, ಹಣಮಂತ ಕುರಬೇಟ, ರಾಜು ದಬಾಡಿ, ಮಾರುತಿ ಸುರಣ್ಣವರ, ಶ್ರೀಶೈಲ ಮುಗಳಿ, ಮಲ್ಲಪ್ಪ ಕಂಕಣವಾಡಿ, ಈರಪ್ಪ ಮುತ್ನಾಳ, ವೀರ ನಾರಿಯರಾದ ಪದ್ಮಾ ಪರಸನ್ನವರ, ಶೋಭಾ ದಾನನ್ನವರ, ಲಲೀತಾ ನಾಗನೂರ, ಭಾರತಿ ಬಡಿಗೇರ ಸೇರಿದಂತೆ ಅನೇಕ ಯರಗಟ್ಟಿ ಬೈಲಹೊಂಗಲ ಹಾಗೂ ರಾಮದುರ್ಗ ತಾಲೂಕುಗಳ ಮಾಜಿ ಸೈನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.