ADVERTISEMENT

ಕೋಯ್ನಾ ನೀರು ಬಿಡುಗಡೆಗೆ ಮತ್ತೊಮ್ಮೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಮೇ 2019, 13:37 IST
Last Updated 10 ಮೇ 2019, 13:37 IST

ಬೆಳಗಾವಿ: ‘ಸಂಪೂರ್ಣ ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೋಯ್ನಾ ಅಥವಾ ವಾರ್ಣಾ ಜಲಾಶಯದಿಂದ 4 ಟಿಎಂಸಿ ನೀರು ಬಿಡುಗಡೆ ಮಾಡಬೇಕು’ ಎಂದು ಕೋರಿ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಾರಾಷ್ಟ್ರ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶುಕ್ರವಾರ ಪತ್ರ ಕಳುಹಿಸಿದ್ದಾರೆ.

ಮೇ 4ರಂದು ಮೊದಲ ಪತ್ರ ಬರೆಯಲಾಗಿತ್ತು.

‘ಮಹಾರಾಷ್ಟ್ರದ ಒತ್ತಾಯದಂತೆ ‘ನೀರು ವಿನಿಮಯ ಒಪ್ಪಂದ’ಕ್ಕೆ ಕರ್ನಾಟಕ ಸಿದ್ಧವಿದೆ. ಲೋಕಸಭಾ ಚುನಾವಣೆ ಮಾದರಿ ನೀತಿಸಂಹಿತೆ ಮುಗಿಯುವ ಮೇ 23ರ ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಸದ್ಯ ತುರ್ತಾಗಿ 4 ಟಿಎಂಸಿ ನೀರು ಬಿಡುಗಡೆ ಮಾಡಬೇಕು’ ಎಂದು ಕೋರಲಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಈ ಮಧ್ಯೆ, ಆ ರಾಜ್ಯದ ಸಾತಾರಾ ಜಿಲ್ಲೆಯ ಪಾಠಣ್ ಶಾಸಕ ಶಿವಸೇನೆಯ ಶಂಭುರಾಜ ದೇಸಾಯಿ, ‘ಕರ್ನಾಟಕಕ್ಕೆ ಕೋಯ್ನಾದಿಂದ ನೀರು ಬಿಡುಗಡೆ ಮಾಡಬಾರದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರಿಗೆ ಪತ್ರ ಬರೆದಿದ್ದಾರೆ.

‘ಜಲಾಶಯದಲ್ಲಿ ಪ್ರಸ್ತುತ 34 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 40 ಟಿಎಂಸಿ ಇತ್ತು. ಸದ್ಯ ವಿದ್ಯುತ್ ಉತ್ಪಾದನೆಗೆ 17 ಟಿಎಂಸಿ ಅವಶ್ಯವಾಗಿದೆ. ಹೀಗಾಗಿ, ನೀರು ಖಾಲಿ ಮಾಡುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

‘ಸರ್ಕಾರವು ಕೇವಲ ಪತ್ರ ಬರೆದು ಸುಮ್ಮನಾಗುವ ಬದಲಿಗೆ, ಹಿರಿಯ ಅಧಿಕಾರಿಯನ್ನೇ ಮಹಾರಾಷ್ಟ್ರಕ್ಕೆ ಕಳುಹಿಸಿ ವ್ಯವಹರಿಸಬೇಕು. ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೋರಾಟಗಾರ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.