ADVERTISEMENT

ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಮಾರ್ಗದರ್ಶನ: ಐಪಿಎಸ್‌ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 14:56 IST
Last Updated 7 ಜನವರಿ 2022, 14:56 IST
ಐಗಳಿ ಸಮೀಪದ ಕೋಹಳ್ಳಿಯ ಭಾರತ ಬ್ಯಾಂಕ್‌ ಹಾಗೂ ಸಂಗಮೇಶ್ವರ ಪಿ.ಕೆ.ಪಿ.ಎಸ್.ನವರು ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಅವರನ್ನು ಸತ್ಕರಿಸಿದರು
ಐಗಳಿ ಸಮೀಪದ ಕೋಹಳ್ಳಿಯ ಭಾರತ ಬ್ಯಾಂಕ್‌ ಹಾಗೂ ಸಂಗಮೇಶ್ವರ ಪಿ.ಕೆ.ಪಿ.ಎಸ್.ನವರು ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಅವರನ್ನು ಸತ್ಕರಿಸಿದರು   

ಐಗಳಿ: ‘ಮನಸ್ಟಿಟ್ಟು ಓದುವುದು-ಪಾಠ ಕೇಳುವುದು, ತಾಯಿ–ತಂದೆ ಮತ್ತು ಗುರುಗಳ ಮಾತನ್ನು ಪಾಲಿಸುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಅದರಿಂದ ಯಶಸ್ಸು ಸಿಗುತ್ತದೆ’ ಎಂದು ಐಪಿಎಸ್‌ ಅಧಿಕಾರಿ ರವೀಂದ್ರ ಗಡಾದಿ ಹೇಳಿದರು.

ಸಮೀಪದ ಕೋಹಳ್ಳಿ ಗ್ರಾಮದ ಭಾರತ ಬ್ಯಾಂಕ್‌ ಹಾಗೂ ಸಂಗಮೇಶ್ವರ ಪಿ.ಕೆ.ಪಿ.ಎಸ್. ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಿಕೆಯ ವಿಷಯಕ್ಕೆ ಮಾತ್ರವೇ ಮಕ್ಕಳಿಗೆ ಮೊಬೈಲ್‌ ಫೋನ್‌ ಕೊಡಬೇಕು. ಅವರು ಶಾಲೆಯಲ್ಲಿ ಏನು ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಿಗಾ ವಹಿಸಬೇಕು. ದಾರಿ ತಪ್ಪುತ್ತಿದ್ದರೆ ಬುದ್ಧಿ ಮಾತಿನಿಂದ ಸರಿ ದಾರಿಗೆ ತರಬೇಕು’ ಎಂದು ಪೋಷಕರಿಗೆ ಸಲಹೆ ನೀಡಿದರು.

ADVERTISEMENT

‘ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಮಾರ್ಗದರ್ಶನ ಮಾಡುತ್ತೇನೆ’ ಎಂದರು.

ಭಾರತ ಬ್ಯಾಂಕ್‌ ಅಧ್ಯಕ್ಷ ನೂರಅಹ್ಮದ ಡೊಂಗರಗಾಂವ ಮಾತನಾಡಿದರು. ಸಂಗಮೇಶ್ವರ ಪಿ.ಕೆ.ಪಿ.ಎಸ್. ಅಧ್ಯಕ್ಷ ಬದ್ರುದ್ದೀನ್‌ ಡೊಂಗರಗಾಂವ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಕೊಡಗ, ಶಂಕರ ಪೂಜಾರಿ, ಕೇದಾರಿ ವಳಸಂಗ, ಬಾಳು ಸಲಗರ, ಮಾನಿಂಗ ಪೂಜಾರಿ, ಸೈಬಣ್ಣ ಪೂಜಾರಿ, ಮಹಾದೇವ ಬಿರಾದಾರ ಇದ್ದರು.

ಮುಖ್ಯ ಕಾರ್ಯನಿರ್ವಾಹಕ ಶಿವಗೌಡ ಮುಧೋಳ ಸ್ವಾಗತಿಸಿದರು. ಭಾರತ ಬ್ಯಾಂಕಿನ ವ್ಯವಸ್ಥಾಪಕ ಚನ್ನಪ್ಪ ತೆಲಸಂಗ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.