ರಾಮದುರ್ಗ: ‘ನಿತ್ಯ ಶ್ರಮ ಜೀವಿಗಳಾದ ಹಮಾಲರಿಗೆ ಕುಟುಂಬ ನಿರ್ಹವಣೆಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.
ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಿಸಿದ ಹಮಾಲರ ಸಂಘದ ಕಾರ್ಯಾಲಯವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಹಮಾಲರು ಕೇವಲ ಅಧಿಕಾರಿಗಳ ಮೇಲೆ ಜವಾಬ್ದಾರಿ ಹಾಕಿ ಸುಮ್ಮನೆ ಕುಳಿತರೆ ಸಾಲದು. ತಾವೂ ಸಹ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ತಿಳಿಸಿದರು.
‘ಹಮಾಲರು, ಎಪಿಎಂಸಿಯಲ್ಲಿ ಖರೀದಿಸಿದ ಆಹಾರ ಧಾನ್ಯಗಳನ್ನು ಖರೀದಿದಾರರಿಗೆ ಹೊರೆಯಾಗದಂತೆ ಮತ್ತು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತಾರೆ. ಅವರಿಗೆ ಸರ್ಕಾರಿ ಸೌಲಭ್ಯ ದೊರಕಲು ನಾನೂ ಯತ್ನಿಸುತ್ತೇನೆ’ ಎಂದರು.
‘ಕಾರ್ಯಾಲಯಕ್ಕೆ ಟೇಬಲ್ ಹಾಗೂ ಕುರ್ಚಿಗಳನ್ನು ದೇಣಿಗೆ ನೀಡುತ್ತೇನೆ’ ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ ಅಧ್ಯಕ್ಷತೆ ವಹಿಸಿದ್ದರು. ಹಮಾಲಿಗಳ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಸಹ ಕಾರ್ಯದರ್ಶಿ ಗುರುಶಿದ್ದಪ್ಪ ಅಂಬಿಗೇರ, ಬಸವರಾಜ ಅರೆನ್ನವರ, ಕಾರ್ಮಿಕ ಇನ್ಸ್ಪೆಕ್ಟರ್ ಎಂ.ಎಚ್. ದೊಡಮನಿ, ನಾಗರಾಜ ಪೂಜಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.