ADVERTISEMENT

ಹಂದಿಗುಂದ ಹಾಲು ಉತ್ಪಾದಕರ ಸಹಕಾರಿ ಸಂಘ: ಪ್ರಗತಿಯತ್ತ ಹೆಜ್ಜೆ, ಸದಸ್ಯರಿಗೆ ಅನುಕೂಲ

ಎಸ್.ಎಸ್.ಹಿರೇಮಠ
Published 2 ಫೆಬ್ರುವರಿ 2022, 19:30 IST
Last Updated 2 ಫೆಬ್ರುವರಿ 2022, 19:30 IST
ಹಂದಿಗುಂದ ಹಾಲು ಉತ್ಪಾದಕರ ಸಹಕಾರಿ ಸಂಘದ ನೋಟ ‍‍
ಹಂದಿಗುಂದ ಹಾಲು ಉತ್ಪಾದಕರ ಸಹಕಾರಿ ಸಂಘದ ನೋಟ ‍‍   

ಹಂದಿಗುಂದ: ಇಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘ ‍‍ಪ್ರಗತಿಪಥದಲ್ಲಿದೆ. ನೂತನ ಸಭಾಭವನ ಸಜ್ಜುಗೊಂಡಿದ್ದು, ಉದ್ಘಾಟನಾ ಸಮಾರಂಭ ಫೆ. 3ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

1985-86ರಲ್ಲಿ ಆರಂಭವಾದ ಸಂಘಕ್ಕೆ ಮೊದಲ ಅಧ್ಯಕ್ಷರಾಗಿ ಬನಪ್ಪ ತೇಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. 4ವರ್ಷಗಳಲ್ಲಿ 3 ಬಾರಿ ಗ್ರಾಹಕರಲ್ಲಿ ತಿಳಿವಳಿಕೆ ಇಲ್ಲದೆ, ಹಾಲಿನ ಕೊರತೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಸಂಘ ಬಂದ್ ಆಗಿತ್ತು. ಜಿಲ್ಲಾ ಹಾಲು ಒಕ್ಕೂಟದಿಂದ ಸ್ಥಳೀಯ ಸಹಕಾರಿ ಸಂಘ ಹಾಗೂ ಸದಸ್ಯರಿಗೆ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮಿಶ್ರತಳಿ ಹಸುಗಳನ್ನು ಖರೀದಿಸಲು ಬ್ಯಾಂಕ್‌ಗಳಿಂದ ಸಹಾಯಧನ ದೊರಕಿಸಿದ್ದು ನೆರವಾಯಿತು. ಹಾಲಿನ ಸಂಗ್ರಹ ಹೆಚ್ಚಿತು.

ಆಗ ಮರದ ಕೆಳಗೆ ಹಾಲು ಸಂಗ್ರಹಿಸುತ್ತಿದ್ದರು. ಕೆಲ ಸಿಬ್ಬಂದಿ ವೇತನವಿಲ್ಲದೆ ಕಾರ್ಯನಿರ್ವಹಿಸಿದರು. ನಂತರ ನಿತ್ಯ ಸಾವಿರ ಲೀಟರ್‌ನಿಂದ 2ಸಾವಿರ ಲೀಟರ್ ಹಾಲು ಶೇಖರಣೆ ಶುರುವಾಯಿತು. ಸಿಬ್ಬಂದಿ, ರೈತರು ಹಾಲು ಉತ್ಪಾದಕರಿಗೆ ತರಬೇತಿ ನೀಡಿದರು. ಅದರ ಫಲವಾಗಿ ಹತ್ತು ವರ್ಷಗಳ ಕಾಲ ಸಂಘವು ಲಾಭದತ್ತ ಮುನ್ನಡೆದಿದೆ. ಜಾಗ ಪಡೆದು 15ನೇ ವರ್ಷದಲ್ಲಿ ಸ್ವಂತ ಕಟ್ಟಡ ಹೊಂದಿತು. ಪ್ರತಿ ವರ್ಷ ರೈತರು, ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಬೋನಸ್, ಲಾಭಾಂಶ, ತುಟ್ಟಿಭತ್ಯೆ ವಿತರಿಸುತ್ತಿದ್ದಾರೆ.

ADVERTISEMENT

ಸಭಾಭವನ:

ಸಂಘವು ಈಗ ನಿತ್ಯ 4,500 ಲೀಟರ್‌ ಹಾಲು ಸಂಗ್ರಹಿಸುತ್ತಿದೆ. ಶೀತಲೀಕರಣ ಕೇಂದ್ರ ಹೊಂದಿದೆ. ₹ 15 ಲಕ್ಷ ವೆಚ್ಚದಲ್ಲಿ ಸಭಾಭವನ ನಿರ್ಮಿಸಿದೆ. ಗಣಕೀಕೃತ ವ್ಯವಸ್ಥೆ ಹೊಂದಿದೆ. ₹ 38 ಲಕ್ಷ ನಿಶ್ಚಿತ ಠೇವಣಿ ಇಟ್ಟಿದೆ. ಜಿಲ್ಲಾ ಹಾಲು ಒಕ್ಕೂಟದಿಂದ ಅತಿ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದೆ.

ಸಭಾಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಂದಿಗುಂದದ ಸಿದ್ದೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಕುಡಚಿ ಶಾಸಕ ಪಿ. ರಾಜೀವ್ ಉದ್ಘಾಟಿಸುವರು. ವೇದಮೂರ್ತಿ ಗುರುಲಿಂಗಯ್ಯ ಹಿರೇಮಠ ಜ್ಯೋತಿ ಬೆಳಗಿಸುವರು. ಹಂದಿಗುಂದ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಸ್ಥಾಪಕ ರಾಮನಗೌಡ ಪಾಟೀಲ, ಈಗಿನ ಅಧ್ಯಕ್ಷ ಶಿವಾನಂದ ಸಾತಪ್ಪಗೋಳ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.