ಬೆಳಗಾವಿ: ‘ಇಸ್ಕಾನ್ ಬೆಳಗಾವಿ ಘಟಕದ ವತಿಯಿಂದ ಜ.24, 25ರಂದು ಹರೇಕೃಷ್ಣ ರಥಯಾತ್ರೆ ಮಹೋತ್ಸವ ಆಯೋಜಿಸಲಾಗಿದೆ’ ಎಂದು ಇಸ್ಕಾನ್ ಬೆಳಗಾವಿ ಘಟಕದ ಅಧ್ಯಕ್ಷ ಭಕ್ತಿರಸಾಮೃತ ಸ್ವಾಮಿ ಮಹಾರಾಜ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಳಕವಾಡಿಯ ಶುಕ್ರವಾರ ಪೇಟೆಯ ಇಸ್ಕಾನ್ ಮಂದಿರ ಹಿಂಭಾಗದ ಮೈದಾನದಲ್ಲಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ದೇಶ–ವಿದೇಶದ ಭಕ್ತರು ಪಾಲ್ಗೊಳ್ಳುವರು’ ಎಂದರು.
‘ನಿತ್ಯ ಸಂಜೆ ಭಜನೆ, ಕೀರ್ತನೆ, ಆರತಿ, ಮಕ್ಕಳ ಮನರಂಜನಾ ಕಾರ್ಯಕ್ರಮ, ಪ್ರವಚನ ನಡೆಯಲಿವೆ. ಭಗವದ್ಗೀತೆ ಪ್ರದರ್ಶನ, ಸ್ಲೈಡ್ ಷೋ, ಆಧ್ಯಾತ್ಮಿಕ ಪುಸ್ತಕಗಳ ಪ್ರದರ್ಶನ ನಡೆಯಲಿದೆ. ಗೋ ಸಗಣಿ ಮತ್ತು ಗೋಮೂತ್ರದಿಂದ ರಚಿಸಲಾದ ವಿವಿಧ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು’ ಎಂದು ಹೇಳಿದರು.
‘ಜ.24ರಂದು ಮಧ್ಯಾಹ್ನ 12.45ಕ್ಕೆ ಧರ್ಮವೀರ ಸಂಭಾಜಿ ವೃತ್ತದಿಂದ ಹೊರಡುವ ರಥಯಾತ್ರೆ ಕಾಲೇಜು ರಸ್ತೆ, ಯಂಡೇಖೂಟ, ಸಮಾದೇವಿ ಗಲ್ಲಿ, ಖಡೇಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಕಪಿಲೇಶ್ವರ ರಸ್ತೆ, ಗೋವಾವೇಸ್ ಮಾರ್ಗವಾಗಿ ಸಾಗಿ, ಟಿಳಕವಾಡಿಯ ಶುಕ್ರವಾರ ಪೇಟೆಯ ಇಸ್ಕಾನ್ ಮಂದಿರ ಹಿಂಭಾಗದ ಮೈದಾನ ತಲುಪಲಿದೆ’ ಎಂದರು.